ADVERTISEMENT

ಭ್ರಷ್ಟಾಚಾರದ ವಿರುದ್ಧ ಭಾರತೀಯರ ಜನಾದೇಶ: ಪ್ರಧಾನಿ ಮೋದಿ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2018, 19:30 IST
Last Updated 3 ಮಾರ್ಚ್ 2018, 19:30 IST
ನರೇಂದ್ರ ಮೋದಿ (ಸಂಗ್ರಹ ಚಿತ್ರ).
ನರೇಂದ್ರ ಮೋದಿ (ಸಂಗ್ರಹ ಚಿತ್ರ).   

ನವದೆಹಲಿ: ‘ಭ್ರಷ್ಟಾಚಾರದ ವಿರುದ್ಧ ನಮ್ಮ ಸರ್ಕಾರ ತೆಗೆದುಕೊಂಡ ಕ್ರಮಗಳು ರಾಜಕೀಯ ದ್ವೇಷದ ಕ್ರಮಗಳಲ್ಲ. ಈ ಗೆಲುವು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಭಾರತೀಯರು ನಮಗೆ ನೀಡಿದ ಜನಾದೇಶ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ತ್ರಿಪುರಾ ಮತ್ತು ನಾಗಾಲ್ಯಾಂಡ್‌ ವಿಧಾನಸಭಾ ಚನಾವಣೆಯಲ್ಲಿ ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳ ಮೈತ್ರಿಕೂಟ ಗೆಲುವು ಸಾಧಿಸಿದ ಸಂಭ್ರಮಾಚರಣೆ ಅಂಗವಾಗಿ ಪಕ್ಷದ ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಅವರು ಈ ಮಾತು ಹೇಳಿದ್ದಾರೆ.

‘ಕಾಂಗ್ರೆಸ್‌ಗೆ ಈ ಮಟ್ಟದ ಅವಮಾನ ಯಾವತ್ತೂ ಆಗಿರಲಿಲ್ಲ. ಕಾಂಗ್ರೆಸ್‌ ನಾಯಕರ ಸ್ಥಾನ ಏರಿಕೆಯಾಗುವದರ ಜತೆಯಲ್ಲೇ ಆ ನಾಯಕರ ಘನತೆ ಕಡಿಮೆಯಾಗುತ್ತಿದೆ. ಕಾಂಗ್ರೆಸ್‌ನ ಈ ಸಂಸ್ಕೃತಿ ಬಿಜೆಪಿಯೂ ಸೇರಿದಂತೆ ಬೇರೆ ಯಾವ ಪಕ್ಷಗಳಿಗೂ ಬರದಿರಲಿ’ ಎಂದು ಅವರು ಹೇಳಿದರು.

ADVERTISEMENT

‘ಕೇರಳ, ಕರ್ನಾಟಕ, ಒಡಿಶಾ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಬಿಜೆಪಿ ಕಾರ್ಯಕರ್ತರ ಹತ್ಯೆಗಳಾಗುತ್ತಿವೆ. ವಿರೋಧ ಪಕ್ಷದವರಿಗೆ ನಮ್ಮನ್ನು ಎದುರಿಸುವ ಧೈರ್ಯವಿಲ್ಲ. ಹೀಗಾಗಿ ನಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿದ್ದಾರೆ. ಅವರ ತ್ಯಾಗ ವ್ಯರ್ಥವಾಗುವುದಿಲ್ಲ’ ಎಂದು ಮೋದಿ ಹೇಳಿದ್ದಾರೆ.

ಮೋದಿ ನಾಯಕತ್ವಕ್ಕೆ ಅನುಮೋದನೆ
ಈ ಗೆಲುವು ಪ್ರಧಾನಿ ನರೇಂದ್ರ ಮೋದಿ ನಾಯಕತ್ವಕ್ಕೆ ಈಶಾನ್ಯ ಭಾರತದ ಜನ ನೀಡಿದ ಅನುಮೋದನೆ ಎಂದು ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಪ್ರತಿಕ್ರಿಯಿಸಿದ್ದಾರೆ.

‘ತ್ರಿಪುರಾದ ಗೆಲುವು ಐತಿಹಾಸಿಕ. ಎಡಪಕ್ಷಕ್ಕೆ ದೇಶದಲ್ಲಿ ಈಗ ಜಾಗವೇ ಇಲ್ಲ. ಅವರನ್ನು ಮೊದಲು ಪಶ್ಚಿಮ ಬಂಗಾಳದಿಂದ ಹೊರದಬ್ಬಲಾಯಿತು, ಈಗ ತ್ರಿಪುರಾದಿಂದ. ಕರ್ನಾಟಕವನ್ನೂ ನಾವು ಗೆಲ್ಲುತ್ತೇವೆ’ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ನನಗೆ ಮತ್ತು ಬಿಜೆಪಿಯ ಕೋಟ್ಯಂತರ ಕಾರ್ಯಕರ್ತರಿಗೆ ಇದು ಅತ್ಯಂತ ಸಂತೋಷದ ದಿನ’ ಎಂದು ಅವರು ಬಣ್ಣಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.