ADVERTISEMENT

ಮತ್ತಿಬ್ಬರು ಶಾಸಕರ ಬಂಧನ

ಮುಜಫ್ಫರ್‌ನಗರ ಕೋಮುಗಲಭೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 19:59 IST
Last Updated 21 ಸೆಪ್ಟೆಂಬರ್ 2013, 19:59 IST

ಲಖನೌ: ಉತ್ತರ ಪ್ರದೇಶದ ಮುಜ­ಫ್ಫರ್‌­ನಗರದಲ್ಲಿ ನಡೆದ ಕೋಮು­ಗಲ­ಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪೊಲೀಸರು ಶನಿವಾರ ಮತ್ತಿಬ್ಬರು ಶಾಸಕರನ್ನು ಬಂಧಿಸಿದ್ದಾರೆ.

ಬಿಜೆಪಿಯ ಸಂಗೀತ್ ಸೋಮ್ ಮತ್ತು ಬಿಎಸ್‌ಪಿಯ ನೂರ್ ಸಲೀಂ ರಾಣಾ ಬಂಧನಕ್ಕೊಳಗಾದ ಶಾಸಕರು. ಸೋಮ್ ಅವರು ಮೀರತ್‌ನಲ್ಲಿ ಶರ­ಣಾಗಿದ್ದು, ಸಲೀಂ ಅವರನ್ನು ಮುಜಫ್ಫರ್‌­ನಗರದಲ್ಲಿ ಬಂಧಿಸಲಾಗಿದೆ.

ಈ ಮೂಲಕ ಗಲಭೆ ಸಂಬಂಧಿಸಿದಂತೆ ಬಂಧನಕ್ಕೊಳಗಾದ ಶಾಸಕರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಶುಕ್ರವಾರ ವಷ್ಟೆ ಮತ್ತೊಬ್ಬ ಬಿಜೆಪಿ ಶಾಸಕ ಸುರೇಶ್ ರಾಣಾ ಅವರನ್ನು ಪೊಲೀಸರು ಬಂಧಿಸಿದ್ದರು.

ಮೂಲಗಳ ಪ್ರಕಾರ, ಬಿಜೆಪಿಯ ಮತ್ತೊಬ್ಬ ಶಾಸಕ ಹುಕುಂ ಸಿಂಗ್ ಅವರನ್ನು ಬಂಧಿಸಲಾಗಿದ್ದು, ಈ ಕುರಿತು ವರದಿಗಳು ಇನ್ನು ಧೃಡಪಟ್ಟಿಲ್ಲ. ‘ಪ್ರಕ ರಣಕ್ಕೆ ಸಂಬಂಧಿಸಿದ ತನಿಖೆ ಪ್ರಗತಿ ಯಲ್ಲಿದ್ದು, ಪುರಾವೆಗಳನ್ನು ಕಲೆ ಹಾಕಿದ ನಂತರ, ಇನ್ನಷ್ಟು ಮಂದಿಯ ಬಂಧನ ವಾಗಲಿದೆ’ ಎಂದು ಪೊಲೀಸ್ ಮಹಾ ನಿರ್ದೇಶಕ ಆರ್.ಕೆ. ವಿಶ್ವಕರ್ಮ ತಿಳಿಸಿದ್ದಾರೆ.

ಈ ಮಧ್ಯೆ, ‘ಗಲಭೆ ಪ್ರಚೋದಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿರುವ ಯಾವ ಶಾಸಕರನ್ನು ಬಿಡುವುದಿಲ್ಲ’ ಎಂದು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹೇಳಿದ್ದಾರೆ.

ಧ್ರುವೀಕರಣದ ದುರುದ್ದೇಶ: ಟೀಕಾಸ್ತ್ರ
ಮುಜಫ್ಫರ್‌ನಗರ (ಪಿಟಿಐ):
  ಬಿಜೆಪಿ ಮತ್ತು ಸಮಾಜವಾದಿ ಪಕ್ಷಗಳು ಇಲ್ಲಿನ ಹಿಂಸಾಚಾರದ ಮೂಲಕವೇ ತಮ್ಮ ಲೋಕಸಭಾ ಚುನಾವಣಾ ತಯಾರಿ ಆರಂಭಿಸಿವೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಜೈರಾಮ್‌ ರಮೇಶ್‌ ಚುಚ್ಚಿದ್ದಾರೆ.

ಉತ್ತರ ಪ್ರದೇಶದಲ್ಲಿನ ಪಕ್ಷದ ವಿದ್ಯಮಾನಗಳ ಮೇಲ್ವಿಚಾರಕರಾದ ಅಮಿತ್‌ ಷಾ ಅವರನ್ನು ನೇಮಕ ಮಾಡಿದಾಗಲೇ ಕೋಮುವಾದದ ಉದ್ವಿಗ್ನತೆ ಯನ್ನು ಬಂಡವಾಳ ಮಾಡಿ ಕೊಂಡು ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಹವಣಿ ಸುತ್ತಿರುವುದು ಸ್ಪಷ್ಟವಾಯಿತು.
 

ಉತ್ತರ ಪ್ರದೇಶದಲ್ಲಿ ಕೋಮು ಧ್ರುವೀಕರಣ ಮಾಡಬೇಕೆಂಬುದೇ ಬಿಜೆಪಿ ದುರುದ್ದೇಶವಾಗಿದೆ. ಸಮಾಜವಾದಿ ಪಕ್ಷ ಕೂಡ ಇದರಿಂದ ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದೆ ಎಂದು ಜೈರಾಮ್‌ ಟೀಕಿಸಿದರು.

‘ಎಸ್ಪಿ ಅವಧಿಯಲ್ಲಿ ಹೆಚ್ಚು ಗಲಭೆ’
ನವದೆಹಲಿ/ಲಖನೌ (ಐಎಎನ್‌ಎಸ್‌):
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ (ಎಸ್‍‍ಪಿ)ದ ಅಧಿಕಾರದ ಅವಧಿಯಲ್ಲಿ ಸರಣಿ ಕೋಮುಗಲಭೆಗಳು ನಡೆದಿವೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್‌ ಆರೋಪಿಸಿದರು.

ಮುಜಫ್ಫರ್‌ನಗರದ ಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ರದ್ದು ಪಡಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಗಲಭೆಗಳ ಇತಿಹಾಸವನ್ನು ನೋಡಿದಾಗ ಸಮಾಜವಾದಿ ಪಕ್ಷ ಅಧಿಕಾರದಲ್ಲಿ ಇರುವಾಗಲೇ ಸರಣಿ ಗಲಭೆಗಳು ನಡೆದಿರುವುದು ಕಂಡುಬಂದಿದೆ ಎಂದರು.

ಜಿಲ್ಲಾಧಿಕಾರಿ ಕುಶಾಲ್‌ ರಾಜ್‌ ಮುಜಫ್ಫರ್‌ನಗರಕ್ಕೆ ಭೇಟಿ ನೀಡದಂತೆ ರಾಜನಾಥ್‌ ಸಿಂಗ್‌ ಅವರಿಗೆ ಮನವಿ ಮಾಡಿದ್ದರು. ಈ ಸಂಬಂಧ ಪತ್ರವನ್ನು ಫ್ಯಾಕ್ಸ್‌ ಮಾಡಲಾಗಿತ್ತು  ಎಂದು ಅಧಿಕಾರಿಗಳು ತಿಳಿಸಿದರು.

ಹಿಂಸಾಚಾರದಲ್ಲಿ ತಮ್ಮ ಕೈವಾಡವಿರುವುದನ್ನು ಮರೆಮಾಚಲು ಮುಖ್ಯ ಮಂತ್ರಿ ಅಖಿಲೇಶ್‌ ಯಾದವ್‌ ನೇತೃತ್ವದ ಸರ್ಕಾರ ಅಮಾಯಕ ಜನರನ್ನು ಬಂಧಿಸುತ್ತಿದೆ ಎಂದು ರಾಜನಾಥ್‌ ಆರೋಪಿಸಿದರು.

ಟಿ.ವಿ ಚಾನೆಲ್‌ವೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಿಂದ ಗಲಭೆ ಯಲ್ಲಿ ಸರ್ಕಾರದ ಒಳಗಿರುವ ವ್ಯಕ್ತಿಗಳ ಕೈವಾಡವಿರುವುದು ದೃಢಪಟ್ಟಿದೆ. ಹೀಗಿರುವಾಗ ಬಿಜೆಪಿ ಶಾಸಕರನ್ನು ಮಾತ್ರವೇ ಬಂಧಿಸುತ್ತಿರುವುದೇಕೆ ಎಂದು ಪ್ರಶ್ನಿಸಿದರು. ಮುಜಫ್ಫರ್‌ನಗರದಲ್ಲಿ  ತುರ್ತುಕಾಲದ ಸ್ಥಿತಿ  ಇದೆ. ಶೀಘ್ರ ದಲ್ಲಿಯೇ ಪಕ್ಷದ ಮುಖಂಡರು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರನ್ನು ಭೇಟಿ ಮಾಡುವರು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT