ತಿರುವನಂತಪುರ: ಕೇರಳದಲ್ಲಿ ಇನ್ನು ಮುಂದೆ ಮದುವೆ ಸಮಾರಂಭ ಗಳು ‘ಹಸಿರುಮಯ’ ಆಗಲಿದ್ದು, ಪ್ಲಾಸ್ಟಿಕ್ ಬಳಕೆಗೆ ಅವಕಾಶ ಇರುವುದಿಲ್ಲ.
ಮದುವೆ ಸಮಾರಂಭಗಳನ್ನು ಪರಿಸರ ಸ್ನೇಹಿ ಆಗಿಸುವ ಉದ್ದೇಶದಿಂದ ಸರ್ಕಾರ ‘ಹಸಿರು ಶಿಷ್ಟಾಚಾರ’ ಜಾರಿಗೆ ತರಲು ಮುಂದಾಗಿದೆ.
ಸರ್ಕಾರ ಕೈಗೊಂಡಿರುವ ಪ್ಲಾಸ್ಟಿಕ್ ವಿರೋಧಿ ಕಾರ್ಯಾಚರಣೆ ‘ಹಸಿರು ಕೇರಳ ಅಭಿಯಾನ’ದ ಭಾಗವಾಗಿ ಈ ಹಸಿರು ಶಿಷ್ಟಾಚಾರ ಜಾರಿಗೆ ತರಲಾಗುತ್ತದೆ ಎಂದು ‘ಶುಚಿತ್ವ ಅಭಿಯಾನ’ದ ನಿರ್ದೇಶಕ (ಕಾರ್ಯಕಾರಿ) ಸಿ.ವಿ. ಜಾಯ್ ತಿಳಿಸಿದ್ದಾರೆ.
ಮದುವೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್, ಬಳಸಿ ಬಿಸಾಡುವಂತಹ ಗಾಜುಗಳು ಹಾಗೂ ತಟ್ಟೆಗಳು, ಥರ್ಮಾಕೋಲ್ ಆಲಂಕಾರಿಕ ವಸ್ತುಗಳ ಬಳಕೆ ಅತ್ಯಧಿಕವಾಗಿರುತ್ತದೆ. ಇದರಿಂದ ದೊಡ್ಡ ಪ್ರಮಾಣದಲ್ಲಿ ತ್ಯಾಜ್ಯ ಉಂಟಾಗುತ್ತದೆ. ಇವುಗಳ ಪುನರ್ ಬಳಕೆಯೂ ಸಾಧ್ಯವಿಲ್ಲ. ಇವುಗಳ ಬಳಕೆ ನಿಷೇಧಿಸುವುದರಿಂದ ಪರಿಸರ ಸಂರಕ್ಷಣೆಗೆ ದೊಡ್ಡ ಮಟ್ಟದ ಕೊಡುಗೆ ನೀಡಬಹುದು ಎನ್ನುವುದು ಅಧಿಕಾರಿಗಳ ವಿವರಣೆ.
ಗಾಜಿನಿಂದ ಹಾಗೂ ಇತರೆ ಪರಿಸರ ಸ್ನೇಹಿ ಲೋಹಗಳಿಂದ ತಯಾರಿಸಿದ ತಟ್ಟೆ, ಲೋಟಗಳು, ಪಾತ್ರೆಗಳನ್ನು ಬಳಸುವಂತೆ ಉತ್ತೇಜಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತಪಾಸಣೆ ಆರಂಭ: ಕಲ್ಯಾಣ ಮಂಟಪಗಳಲ್ಲಿ, ಸಭಾಭವನಗಳಲ್ಲಿ, ಹೋಟೆಲ್ಗಳಲ್ಲಿ ಹಾಗೂ ಮದುವೆ ಸಮಾರಂಭಗಳು ನಡೆಯುವ ಇತರೆ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗುತ್ತದೆ. ಶಿಷ್ಟಾಚಾರ ಉಲ್ಲಂಘನೆಯಾದ್ದಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ನೈರ್ಮಲ್ಯ ನಿಗಾ ವಹಿಸಿಕೊಂಡಿರುವ ನೋಡಲ್ ಸಂಸ್ಥೆ ‘ಶುಚಿತ್ವ ಅಭಿಯಾನ’ ಈಗಾಗಲೇ ಪ್ರಾಯೋಗಿಕವಾಗಿ ಕಣ್ಣೂರು, ಎರ್ನಾಕುಲಂ, ಕೊಲ್ಲಂ ಹಾಗೂ ಅಲೆಪ್ಪಿಯಲ್ಲಿ ತಪಾಸಣಾ ಕಾರ್ಯ ಆರಂಭಿಸಿದೆ.
ಮುಖ್ಯಾಂಶಗಳು
* ಹಸಿರು ಶಿಷ್ಟಾಚಾರ ಉಲ್ಲಂಘಿಸಿದಲ್ಲಿ ಕ್ರಮ
* ಪರಿಸರ ಸ್ನೇಹಿ ಲೋಹಗಳಿಂದ ತಯಾರಿಸಿದ ವಸ್ತುಗಳ ಬಳಕೆಗೆ ಉತ್ತೇಜನ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.