ಲಖನೌ: ಮಗಳು ಬೆಳೆದು ದೊಡ್ಡ ವಳಾದ ನಂತರ ಮದುವೆಗೆ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ ಎಂಬ ಕಾರಣದಿಂದ ತಂದೆಯೊಬ್ಬ ಮೂರು ವರ್ಷದ ಮಗಳನ್ನೇ ಕೊಂದಿದ್ದಾನೆ. ಬಡತನದ ಕಾರಣದಿಂದ ಈ ಕೃತ್ಯ ಎಸಗಿರುವುದಾಗಿ ಆರೋಪಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.
ಉತ್ತರ ಪ್ರದೇಶ ಸುಲ್ತಾನಪುರ ಜಿಲ್ಲೆಯ ಸೆವ್ರಾ ಗ್ರಾಮದ ಸುನೀಲ್ ಕುಮಾರ್ ಈ ಅಮಾನವೀಯ ಕೃತ್ಯ ಎಸಗಿರುವ ತಂದೆ.
ಅನನ್ಯಾ ಎಂಬ ಬಾಲಕಿ ಕೆಲವು ದಿನಗಳಿಂದ ಕಾಣೆಯಾಗಿರುವ ಬಗ್ಗೆ ಕುರೇಭರ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು, ಆರೋಪಿಯ ಪತ್ತೆಗಾಗಿ ಶ್ವಾನದಳದ ಸಹಾಯ ಪಡೆದಿದ್ದರು. ಗ್ರಾಮದಿಂದ ಕೆಲವು ಮೀಟರ್ಗಳ ದೂರದಲ್ಲಿರುವ ಬಾವಿಯಲ್ಲಿದ್ದ ಬಾಲಕಿಯ ಶವವನ್ನು ಶ್ವಾನಗಳು ಪತ್ತೆ ಹಚ್ಚಿದ್ದವು.
ಮರಣೋತ್ತರ ಪರೀಕ್ಷೆ ನಡೆಸಿದಾಗ, ಬಾಲಕಿಯನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂದು ವರದಿ ಬಂದಿತ್ತು.
ಶವದ ಪಕ್ಕದಲ್ಲಿ ಸಿಕ್ಕ ಟವೆಲ್ನ ಆಧಾರದ ಮೇಲೆ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ. ‘ಭವಿಷ್ಯದಲ್ಲಿ ಮಗಳ ಮದುವೆಗೆ ಹೆಚ್ಚು ಹಣ ಬೇಕಾಗುತ್ತದೆ. ನಾನು ಬಡವನಾಗಿರುವುದರಿಂದ ಆ ಮೊತ್ತ ವನ್ನು ಭರಿಸಲು ಸಾಧ್ಯವಿಲ್ಲ. ಈ ಕಾರಣ ದಿಂದ, ಮಗಳನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದೇನೆ’ ಎಂದು ಆರೋಪಿ ತಪ್ಪು ಒಪ್ಪಿಕೊಂಡಿದ್ದಾನೆ ಎಂದು ಜಿಲ್ಲೆಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಂಗಳ ವಾರ ತಿಳಿಸಿದ್ದಾರೆ.
ಸುನೀಲ್ಕುಮಾರ್ ಈ ಹಿಂದೆಯೂ ಮಗಳನ್ನು ಕೊಲೆ ಮಾಡಲು ಪ್ರಯತ್ನಿಸಿದ್ದ ಎಂದೂ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.