ಭೋಪಾಲ್: ಮಧ್ಯಪ್ರದೇಶ ರಾಜ್ಯ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು 60ರಿಂದ 62 ವರ್ಷಗಳಿಗೆ ಹೆಚ್ಚಿಸುವುದಾಗಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಘೋಷಿಸಿದ್ದಾರೆ. ಆದರೆ, ನಿರ್ಧಾರದ ಹಿಂದಿನ ಯಾವುದೇ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ.
‘ಬಡ್ತಿ ಮೀಸಲಾತಿ ಕುರಿತ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಕಾರಣ ರಾಜ್ಯದ ಕೆಲವು ನೌಕರರು ಬಡ್ತಿ ಹೊಂದಲು ಸಾಧ್ಯವಾಗಿಲ್ಲ. ಬಡ್ತಿ ಪಡೆಯದೆ ಯಾವುದೇ ನೌಕರ ನಿವೃತ್ತಿ ಹೊಂದಲು ನಾವು ಬಿಡುವುದಿಲ್ಲ. ಆದಕಾರಣ ನಿವೃತ್ತಿ ವಯಸ್ಸು ಹೆಚ್ಚಿಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಚೌಹಾಣ್ ತಿಳಿಸಿದ್ದಾರೆ.
‘ಬಡ್ತಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಅರ್ಜಿಯ ಬಗ್ಗೆ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಪ್ರಕರಣದ ಬಗ್ಗೆ ಎರಡು ವರ್ಷಗಳ ಒಳಗೆ ತೀರ್ಪು ನೀಡುವ ನಿರೀಕ್ಷೆ ಇದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ನೌಕರರ ನಿವೃತ್ತಿ ವಯಸ್ಸು ಹೆಚ್ಚಿಸುವ ಮೂಲಕ ನಿರುದ್ಯೋಗಿ ಯುವಕರಿಗೆ ಸರ್ಕಾರ ದ್ರೋಹ ಬಗೆದಿದೆ ಎಂದು ವಿರೋಧಪಕ್ಷ ಕಾಂಗ್ರೆಸ್ ಆರೋಪಿಸಿದೆ.
‘ನಿರುದ್ಯೋಗ ಯುವಕರಿಗೆ ತಿಂಗಳಿಗೆ ₹ 2 ಸಾವಿರ ನಿರುದ್ಯೋಗ ಭತ್ಯೆ ನೀಡಬೇಕು’ ಎಂದು ವಿರೋಧಪಕ್ಷದ ನಾಯಕ ಅಜಯ್ ಸಿಂಗ್ ಆಗ್ರಹಿಸಿದ್ದಾರೆ.
‘ಸರ್ಕಾರದ ನಿರ್ಧಾರದಿಂದ ನೌಕರರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಇದರಿಂದ ಯುವ ಅಧಿಕಾರಿಗಳು ಮತ್ತು ನೌಕರರ ಬಡ್ತಿಗೆ ತೊಡಕಾಗಲಿದೆ’ ಎಂದು ಹೇಳಿದ್ದಾರೆ.
ನಿರುದ್ಯೋಗಿಗಳ ಸಂಘಟನೆಯಾದ ‘ಬೆರೋಜ್ಗಾರ್ ಸೇನಾ’ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದು, ಇದೊಂದು ವಂಚನೆ ಎಂದು ಟೀಕಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.