ADVERTISEMENT

ಮಧ್ಯಪ್ರದೇಶ: ಬೆದರಿಕೆ ಒಡ್ಡಿದ್ದ ಪತ್ರಕರ್ತ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಉಮರಿಯಾ (ಪಿಟಿಐ): ಹತ್ಯೆಗೊಳಗಾಗಿರುವ  ಪತ್ರಕರ್ತ ಚಂದ್ರಿಕಾ ರಾಯ್, ಇತ್ತೀಚೆಗೆ ನಡೆದ ಅಪಹರಣ ಪ್ರಕರಣವೊಂದರ ಆರೋಪಿಗಳಿಗೆ ಬೆದರಿಕೆ ಹಾಕುತ್ತಿದ್ದರು ಎಂದು ಮಧ್ಯಪ್ರದೇಶ ಪೊಲೀಸ್ ಇಲಾಖೆಯ ವಿಶೇಷ ಕಾರ್ಯ ಪಡೆ ಶುಕ್ರವಾರ ತಿಳಿಸಿದೆ.

ಈ ಮಧ್ಯೆ, ರಾಯ್ ಮತ್ತು ಅವರ ಕುಟುಂಬದ ಸದಸ್ಯರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

`ಇತ್ತೀಚೆಗೆ ಪಿಡಬ್ಲ್ಯುಡಿ ಎಂಜಿನಿಯರ್  ಹೇಮಂತ್ ಜಾರಿಯಾ ಅವರ ಪುತ್ರನನ್ನು ಅಪಹರಣ ಮಾಡಿದ್ದ ಅಪಹರಣಕಾರರ ಪರಿಚಯ ಚಂದ್ರಿಕಾ ಅವರಿಗಿತ್ತು. ಬೆದರಿಕೆಗೆ ಮಣಿಯದ ಅಪಹರಣಕಾರರು ರಾಯ್ ಮತ್ತು ಕುಟುಂಬದ ಸದಸ್ಯರನ್ನು ಹತ್ಯೆ ಮಾಡಿದ್ದಾರೆ~ ಎಂದು ಎಸ್‌ಪಿ ಮನೋಹರ್ ಸಿಂಗ್ ಹೇಳಿದ್ದಾರೆ.

ಜಾರಿಯಾ ಅವರ ಬಳಿ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ಅಮಿತ್ ಮತ್ತು ಆತನ ಸಹವರ್ತಿಗಳು ಫೆಬ್ರುವರಿ 15ರಂದು ಅವರ ಪುತ್ರ ಅನಂತ್‌ನನ್ನು ಅಪಹರಣ ಮಾಡಿ ಐದು ಕೋಟಿ ರೂ ಬೇಡಿಕೆ ಇಟ್ಟಿದ್ದರು.

 ನಂತರ ಬೇಡಿಕೆ ಮೊತ್ತವನ್ನು 5.5 ಲಕ್ಷಕ್ಕೆ ಇಳಿಸಲಾಗಿತ್ತು.  ಬಾಲಕನ ಪತ್ತೆಗೆ ಪೊಲೀಸರು ಶೋಧ ತೀವ್ರಗೊಳಿಸಿದಾಗ ಅಪಹರಣಕಾರರು ಬಾಲಕನನ್ನು ಬಿಯೊಹರಿ ರೈಲು ನಿಲ್ದಾಣದಲ್ಲಿ ಬೇಷರತ್ತಾಗಿ ಬಿಟ್ಟರು ಎಂದು ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

ಅಪಹರಣಕಾರರಲ್ಲಿ ಒಬ್ಬನಾಗಿದ್ದ ಗೃಹರಕ್ಷಕ ದಳದ ಸದಸ್ಯ ವಿದ್ಯಾನಿವಾಸ್ ತಿವಾರಿ ಚಂದ್ರಿಕಾ ರಾಯ್ ಅವರ ನೆರೆ ಮನೆಯಲ್ಲಿದ್ದ. ತಮ್ಮ ನೆರೆಮನೆಯವನೇ ಅಪಹರಣಕಾರ ಎಂಬುದನ್ನು ಅರಿತ ರಾಯ್ ಅವರಿಗೆ ಬೆದರಿಕೆ ಒಡ್ಡಲು ಆರಂಭಿಸಿದರು ಎಂದು  ಜಾರಿಯಾ ಹೇಳಿರುವುದಾಗಿ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.