ಭುವನೇಶ್ವರ: ಉದ್ಯಮಿ ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಕರೆಸಿಕೊಳ್ಳಲು ಕೇಂದ್ರ ಸರ್ಕಾರ ಎಲ್ಲ ರೀತಿಯ ಕ್ರಮಗಳನ್ನು ಕೈಗೊಂಡಿದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆಯ ರಾಜ್ಯ ಖಾತೆ ಸಚಿವ ವಿ.ಕೆ. ಸಿಂಗ್ ಹೇಳಿದ್ದಾರೆ. ಆದರೆ, ಗಡಿಪಾರಿಗೆ ಸಮಯ ನಿಗದಿಪಡಿಸಲಾಗದು ಎಂದು ಅವರು ತಿಳಿಸಿದ್ದಾರೆ.
ವರದಿಗಾರರ ಜತೆ ಮಾತನಾಡಿದ ಅವರು, ‘ಗಡಿಪಾರು ಮಾಡಲು ಬೇಕಾದ ದಾಖಲೆಗಳನ್ನು ಬ್ರಿಟನ್ಗೆ ಕಳುಹಿಸಿಕೊಡಲಾಗಿದೆ. ಅವುಗಳನ್ನು ಅಲ್ಲಿನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬ್ರಿಟನ್ ಸರ್ಕಾರ ಹಸಿರುನಿಶಾನೆ ತೋರಿದ ಕೂಡಲೆ ಮಲ್ಯ ಅವರನ್ನು ಭಾರತಕ್ಕೆ ಕರೆಸಿಕೊಳ್ಳಲಾಗುವುದು’ ಎಂದು ಸಿಂಗ್ ಹೇಳಿದ್ದಾರೆ.
‘ಗಡಿಪಾರು ಎಂಬುದು ಅಂದುಕೊಂಡಷ್ಟು ಸುಲಭದ ಪ್ರಕ್ರಿಯೆ ಅಲ್ಲ. ದೇಶವೊಂದರ ಜತೆ ಗಡಿಪಾರು ಒಪ್ಪಂದಕ್ಕೆ ಸಹಿ ಹಾಕುವ ಸಂದರ್ಭ ಕೆಲವು ಅಂಶಗಳನ್ನು ಅಷ್ಟಾಗಿ ಪರಿಗಣಿಸಲಾಗಿರುವುದಿಲ್ಲ. ಬ್ರಿಟನ್ನ ಕಾನೂನಿನ ಪ್ರಕಾರ, ಯಾವನೇ ವ್ಯಕ್ತಿ ಅಧಿಕೃತ ಪಾಸ್ಪೋರ್ಟ್ನೊಂದಿಗೆ ಆ ದೇಶಕ್ಕೆ ಬಂದರೆ ನಂತರ ಅದು ರದ್ದಾದರೂ ಅಲ್ಲಿ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ. ಭಾರತದ ಕಡೆಯಿಂದ ಮಲ್ಯ ಗಡಿಪಾರಿಗೆ ಬೇಕಾದ ಎಲ್ಲ ಕಡತಗಳನ್ನು ಜಾರಿ ನಿರ್ದೇಶನಾಲಯ ಹಸ್ತಾಂತರಿಸಿದೆ. ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಬ್ರಿಟನ್ನ ಅಧಿಕಾರಿಗಳು ಕಡತಗಳನ್ನು ಪರಿಶೀಲನೆ ಮಾಡಲಿದ್ದಾರೆ’ ಎಂದು ಅವರು ಹೇಳಿದ್ದಾರೆ.
[Related]
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.