ADVERTISEMENT

ಮಹಿಳಾ ಅಧಿಕಾರಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 19:30 IST
Last Updated 8 ಅಕ್ಟೋಬರ್ 2011, 19:30 IST

ಹೈದರಾಬಾದ್ (ಪಿಟಿಐ): ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ, ಓಬಳಾಪುರಂ ಗಣಿ ಕಂಪೆನಿಗೆ ಪರವಾನಗಿ ನೀಡುವಲ್ಲಿ ನಡೆದಿರುವ ಅಕ್ರಮಗಳಿಗೆ ಸಂಬಂಧಿಸಿ ದಂತೆ ಮಹಿಳಾ ಐಎಎಸ್ ಅಧಿಕಾರಿಯೊಬ್ಬರನ್ನು ಸಿಬಿಐ ಶನಿವಾರ ಪ್ರಶ್ನಿಸಿದೆ.

ಆರೋಗ್ಯ ಇಲಾಖೆಯಲ್ಲಿ ಆಯುಕ್ತರಾಗಿರುವ ವೈ.ಶ್ರೀಲಕ್ಷ್ಮಿ  ಅವರ ಎಸ್. ಆರ್.ನಗರ ನಿವಾಸದ ಮೇಲೆ ಮೊದಲು ದಾಳಿ ನಡೆಸಿರುವುದಾಗಿ ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.

2005ರಿಂದ 2009ರ ಅವಧಿಯಲ್ಲಿ ಗಣಿ ಗುತ್ತಿಗೆ ಪರವಾನಗಿ ನೀಡುವಲ್ಲಿ ಸಾಕಷ್ಟು ಅಕ್ರಮಗಳು ನಡೆದಿರುವುದನ್ನು ಸಿಬಿಐ ಪತ್ತೆ ಮಾಡಿದೆ. ಆ ಸಂದರ್ಭದಲ್ಲಿ ಶ್ರೀಲಕ್ಷ್ಮಿ ಅವರು ಆಂಧ್ರ ಪ್ರದೇಶ ಕೈಗಾರಿಕಾ ಇಲಾಖೆ ಕಾರ್ಯದರ್ಶಿಯಾಗಿದ್ದರು.

ಗಣಿ ಪರವಾನಗಿ ನೀಡುವಲ್ಲಿ ಸರ್ಕಾರದ ಹಲವು ಅಧಿಕಾರಿಗಳು ಸಂಚು ನಡೆಸಿರುವ ಬಗ್ಗೆಯೂ ಸಿಬಿಐ ಮಾಹಿತಿ ಕಲೆ ಹಾಕುತ್ತಿದೆ.

ಓಎಂಸಿ ಗಣಿ ಗುತ್ತಿಗೆ ಪಡೆದ ಮೇಲೆ ಗಣಿ ಪ್ರದೇಶದಲ್ಲಿ ಆಂಧ್ರ ಮತ್ತು ಕರ್ನಾಟಕದ ನಡುವಿನ ಗಡಿ ರೇಖೆಯನ್ನು ಅಕ್ರಮವಾಗಿ ಬದಲಾ ವಣೆ ಮಾಡಿರುವ ಆರೋಪವನ್ನೂ ಎದುರಿಸುತ್ತಿದೆ.

ಅಲ್ಲದೆ ಕರ್ನಾಟಕದ ಬಳ್ಳಾರಿಯ ಮತ್ತು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ವ್ಯಾಪಿಸಿರುವ ಮೀಸಲು ಅರಣ್ಯದಲ್ಲಿಯೂ ಗಡಿರೇಖೆಯನ್ನು ನಾಶ ಪಡಿಸಿ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪವೂ ಓಎಂಸಿ ಮೇಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.