ನವದೆಹಲಿ: ಬಲವಂತ ವಾಗಿ ಮಾಡಲಾಗಿರುವ ಮದುವೆ ರದ್ದುಪಡಿಸಬೇಕು ಎಂದು ರಾಜ್ಯದ ರಾಜಕಾರಣಿಯೊಬ್ಬರ ಪುತ್ರಿ ಸಲ್ಲಿಸಿದ್ದ ಅರ್ಜಿ ಸಂಬಂಧ, ಅವರಿಗೆ ರಕ್ಷಣೆ ಒದಗಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ರಾಜ್ಯ ಪೊಲೀಸರಿಗೆ ಸೂಚನೆ ನೀಡಿದೆ.
ತನ್ನ ಸಂಬಂಧಿಯಿಂದ ಜೀವಕ್ಕೆ ಬೆದರಿಕೆ ಇದ್ದು, ರಕ್ಷಣೆ ನೀಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠದ ಎದುರು 26 ವರ್ಷದ ಮಹಿಳೆ ಮನವಿ ಸಲ್ಲಿಸಿದ್ದರು.
ಕಂಪ್ಯೂಟರ್ ಎಂಜಿನಿಯರ್ ಆಗಿರುವ ಮಹಿಳೆ ಬೆಂಗಳೂರಿನಲ್ಲಿ ಉದ್ಯೋಗ ನಿರ್ವಹಿಸುವುದಾಗಿ ಹಾಗೂ ಹೆಚ್ಚಿನ ಅಧ್ಯಯನ ಮಾಡುವುದಾಗಿ ಹೇಳಿದ್ದಾರೆ. ಆದ್ದರಿಂದ ಅಲ್ಲಿಯೇ ಅವರಿಗೆ ರಕ್ಷಣೆ ನೀಡಬೇಕು ಎಂದು ರಾಜ್ಯ ಪೊಲೀಸರಿಗೆ ನ್ಯಾಯಪೀಠ ಸೂಚಿಸಿದೆ.ಮಹಿಳೆ ರಾಜ್ಯಕ್ಕೆ ವಾಪಸಾಗು ವುದಾಗಿ ಹೇಳಿದ್ದರಿಂದ, ಈತನಕ ಪ್ರಕರಣವನ್ನು ನಿರ್ವಹಿಸುತ್ತಿದ್ದ ದೆಹಲಿ ಪೊಲೀಸರು ಹಾಗೂ ರಕ್ಷಣೆ ಒದಗಿಸುತ್ತಿದ್ದ ದೆಹಲಿ ಮಹಿಳಾ ಆಯೋಗವನ್ನು ಸುಪ್ರೀಂ ಕೋರ್ಟ್ ಆ ಹೊಣೆಯಿಂದ ಮುಕ್ತಿಗೊಳಿಸಿದೆ.
ಮಹಿಳೆ ಹಾಗೂ ಅವರ ಕುಟುಂಬದ ಗುರುತು ಬಹಿರಂಗ ಪಡಿಸಬಾರದು ಹಾಗೂ ಮಹಿಳೆಯ ಶೈಕ್ಷಣಿಕ ಪ್ರಮಾಣಪತ್ರಗಳು, ಆಧಾರ್ ಹಾಗೂ ಪಾಸ್ಪೋರ್ಟ್ ಅನ್ನು ಪೋಷಕರು ಹಿಂದಿರುಗಿ ಸಬೇಕು ಎಂದು ಮಹಿಳೆ ಪರ ವಾದ ಮಂಡಿಸುತ್ತಿರುವ ವಕೀಲೆ ಇಂದಿರಾ ಜೈಸಿಂಗ್ ಮಾಡಿದ ಮನವಿಯನ್ನು ನ್ಯಾಯಪೀಠ ಅಂಗೀಕರಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.