ADVERTISEMENT

ಮಾರ್ಪಾಡಿಗೆ ಕೇಂದ್ರ ಒಪ್ಪಿಗೆ

ಕೋಮು ಹಿಂಸಾಚಾರ ಕರಡು ಮಸೂದೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2013, 19:30 IST
Last Updated 5 ಡಿಸೆಂಬರ್ 2013, 19:30 IST

ನವದೆಹಲಿ (ಪಿಟಿಐ): ಬಿಜೆಪಿ ಮತ್ತು ಕಾಂಗ್ರೆಸ್ಸೇತರ ವಿರೋಧ ಪಕ್ಷಗಳ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಉದ್ದೇಶಿತ ಕೋಮುಗಲಭೆ ನಿಯಂತ್ರಣ ಕರಡು ಮಸೂದೆಯಲ್ಲಿಯ ಕೆಲವು ನಿಬಂಧನೆಗಳನ್ನು ಕೈಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕರಡು ಮಸೂದೆಗೆ ಸಂಬಂಧಿಸಿದಂತೆ ವಿರೋಧ ಪಕ್ಷಗಳ ಒಮ್ಮತ ಪಡೆಯಲು   ಯತ್ನಿಸಲಾಗುವುದು ಎಂಬ  ಪ್ರಧಾನಿ ಮನಮೋಹನ ಸಿಂಗ್‌ ಗುರುವಾರ ಹೇಳಿಕೆ ನೀಡಿದ ಬೆನ್ನಲ್ಲೇ ಸರ್ಕಾರದ ಈ ನಿರ್ಧಾರ ಹೊರಬಿದ್ದಿದೆ.

‘ಕೋಮುಗಲಭೆ ನಿಯಂತ್ರಣ ಮತ್ತು ನಿರ್ದಿಷ್ಟ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಡೆಯುವ ಕೋಮು ಹಿಂಸೆ ತಡೆ (ನ್ಯಾಯ ಮತ್ತು ಸ್ಪಷ್ಟ ಪರಿಹಾರಗಳ ಅವಕಾಶ) ಮಸೂದೆ–2013’ಯನ್ನು ಚಳಿಗಾಲ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಸುಶೀಲ್‌ ಕುಮಾರ್‌ ಶಿಂಧೆ ಹೇಳಿದ್ದಾರೆ.

   ಮಸೂದೆಯಲ್ಲಿಯ ಕೆಲವು ಪ್ರಸ್ತಾವನೆಗಳ ಕುರಿತು ಕೆಲವು ರಾಜ್ಯ ಸರ್ಕಾರಗಳು ಮತ್ತು ಕೇಂದ್ರದಲ್ಲಿಯ ವಿರೋಧ ಪಕ್ಷಗಳು ಎತ್ತಿದ ಆಕ್ಷೇಪಗಳನ್ನು ಗಮನದಲ್ಲಿರಿಸಿ­ಕೊಂಡು ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಇನ್ನೂ ಕೆಲವು ಅಂಶಗಳನ್ನು ಉದ್ದೇಶಿತ ಮಸೂದೆಯಿಂದ ಕೈಬಿಡಲಾಗಿದೆ.

ಕೋಮುಗಲಭೆ ನಡೆದ ಸಂದರ್ಭದಲ್ಲಿ ಆ ಸ್ಥಳಗಳಿಗೆ ಕೇಂದ್ರ ಸರ್ಕಾರ ಸೇನೆ ಅಥವಾ ಅರೆಸೇನಾ ಪಡೆಗಳನ್ನು ನೇರವಾಗಿ ರವಾನಿಸುವ ಏಕಪಕ್ಷೀಯ ಅಧಿಕಾರ ಹೊಂದಿತ್ತು. ಆದರೆ, ಮಸೂದೆಯಲ್ಲಿಯ ಹೊಸ ಮಾರ್ಪಾಡುಗಳ ಪ್ರಕಾರ  ರಾಜ್ಯ ಸರ್ಕಾರದ ಒಪ್ಪಿಗೆ ಪಡೆದ ನಂತರವಷ್ಟೇ ಕೇಂದ್ರ ಆ ಸ್ಥಳಕ್ಕೆ ಸೇನೆಯನ್ನು ಕಳಿಸಬಹುದಾಗಿದೆ. ಇನ್ನೂ ಇಂತಹ ಹಲವು ಮಾರ್ಪಾಡುಗಳನ್ನು ಪ್ರಸ್ತಾವಿತ ಕರಡು ಮಸೂದೆಯಲ್ಲಿ ಮಾಡಲಾಗಿದೆ.

ದೇಶದ ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಈ ಮಸೂದೆ ಸಂಸತ್‌ನಲ್ಲಿ ಚರ್ಚೆಗೆ ಬಂದಾಗ  ವಿರೋಧಿಸುವುದಾಗಿ ಬಿಜೆಪಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.