ADVERTISEMENT

ಮುಂಬೈ ದಾಳಿ: ಪಾಕ್ ಕುಮ್ಮಕ್ಕಿಲ್ಲದೆ ಸಾಧ್ಯವಿತ್ತೆ?

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 19:30 IST
Last Updated 4 ಜುಲೈ 2012, 19:30 IST

ನವದೆಹಲಿ (ಪಿಟಿಐ): ಮುಂಬೈ ದಾಳಿಗೆ ಮಾರ್ಗದರ್ಶನ ನೀಡಲು ತೆರೆದಿದ್ದ ನಿಯಂತ್ರಣ ಕೊಠಡಿ (ಕಂಟ್ರೋಲ್ ರೂಂ) ದಾಳಿಗೆ ಮೊದಲು ಹಾಗೂ ದಾಳಿಯ ಸಮಯದಲ್ಲಿ ಪಾಕಿಸ್ತಾನದಲ್ಲೇ ಇತ್ತು ಎನ್ನುವ ಅನುಮಾನ ನಮಗೀಗ ನಿಜವಾಗುತ್ತಿದ್ದು, ಅಲ್ಲಿಯ ಸರ್ಕಾರದ ಕುಮ್ಮಕ್ಕು ಇಲ್ಲದೆಯೇ ಉಗ್ರರು ಇಂತಹ ದುಸ್ಸಾಹಸಕ್ಕಿಳಿಯಲು ಹೇಗೆ ಸಾಧ್ಯವಾಯಿತು ಎಂದು ಗೃಹ ಸಚಿವ ಪಿ.ಚಿದಂಬರಂ ಪ್ರಶ್ನಿಸಿದ್ದಾರೆ.

ದಾಳಿ ನಡೆಸಿದ ಅಜ್ಮಲ್ ಕಸಾಬ್ ಮತ್ತಿತರ ಒಂಬತ್ತು ಜನ ಉಗ್ರರಿಗೆ ತರಬೇತಿ ನೀಡಿದವರ‌್ಯಾರು, ಈ ಎಲ್ಲರೂ ಕಂಟ್ರೋಲ್ ರೂಂ ಸೂಚನೆಯಂತೆ ಕಾರ್ಯಾಚರಣೆ ಕೈಗೊಂಡಿದ್ದು ಸ್ಪಷ್ಟವಾಗಿದೆ.
 
ಬಂಧಿತ ಕಸಾಬ್ ಹಾಗೂ ಅಬು ಜುಂದಾಲ್ ವಿಚಾರಣೆ ಸಮಯದಲ್ಲಿ ಈ ಸಂಬಂಧ ಸಾಕಷ್ಟು ಪುರಾವೆಗಳು ಸಿಕ್ಕಿವೆ, ಈ ಸಂಚಿನಲ್ಲಿ ಪಾಕ್‌ನ ಯಾರ‌್ಯಾರು ಇದ್ದಾರೆ ಎಂಬುದು ನಮಗೆ ಗೊತ್ತಿದೆ ಎಂದು ಚಿದಂಬರಂ ಸುದ್ದಿಗಾರರಿಗೆ ತಿಳಿಸಿದರು.

ಭಾರತ ಪಾಕಿಸ್ತಾನಗಳ ವಿದೇಶಾಂಗ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಆರಂಭವಾಗಿರುವ ಇದೇ ಸಂದರ್ಭ ಬಂಧಿತ ಅಬು ಜುಂದಾಲ್ ಕುರಿತಾಗಿ ಯಾವುದಾದರೂ ದಾಖಲೆ ಪಾಕ್‌ಗೆ ಹಸ್ತಾಂತರಿಸಲಾಗುವುದೇ ಎನ್ನುವ ಪ್ರಶ್ನೆಗೆ, ಈ ಹಂತದಲ್ಲಿ ಯಾವುದೇ ದಾಖಲೆ ಹಸ್ತಾಂತರಿಸಲಾಗುವುದಿಲ್ಲ, ಆದರೆ ವಿದೇಶಾಂಗ ಕಾರ್ಯದರ್ಶಿ ಮಥಾಯ್ ಈ ವಿಷಯದಲ್ಲಿ ನಿರ್ಧಾರ ಕೈಗೊಳ್ಳಲು ಸ್ವತಂತ್ರರಿದ್ದಾರೆ ಎಂದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.