ಐಜ್್ವಾಲ್ (ಪಿಟಿಐ): ಮಿಜೋರಾಂನ ಬ್ರು ವಲಸಿಗರಿಗೆ ರಾಜ್ಯದ ಏಕೈಕ ಲೋಕಸಭಾ ಕ್ಷೇತ್ರಕ್ಕೆ ಏಪ್ರಿಲ್ 9ರಂದು ನಡೆಯುವ ಮತದಾನದಲ್ಲಿ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶ ನೀಡಬಾರದು ಎಂದು ಮುಖ್ಯ ಚುನಾವಣಾ ಆಯುಕ್ತ ವಿ.ಎಸ್. ಸಂಪತ್ ಅವರನ್ನು ಮಿಜೋರಾಂ ಮುಖ್ಯಮಂತ್ರಿ ಲಾಲ್ ಥನ್ಹವ್ಲಾ ಅವರು ಕೋರಿದ್ದಾರೆ.
ಬ್ರು ಸಮುದಾಯದ ಜನರು ಮತ ಚಲಾಯಿಸಲು ಬಯಸಿದರೆ ರಾಜ್ಯದೊಳಕ್ಕೆ ಬಂದು ಮತ ಚಲಾಯಿಸಬೇಕೇ ಹೊರತು ಅಂಚೆ ಮೂಲಕ ಅಲ್ಲ ಎಂದು ಚುನಾವಣಾ ಆಯೋಗಕ್ಕೆ ಬರೆದಿರುವ ಪತ್ರದಲ್ಲಿ ಮಿಜೋರಾಂ ಮುಖ್ಯಮಂತ್ರಿ ಪ್ರತಿಪಾದಿಸಿದ್ದಾರೆ. ಈ ಮೊದಲು ವಲಸಿಗರ ಶಿಬಿರದಲ್ಲಿಯೇ ಮತ ಚಲಾಯಿಸಲು ಅವಕಾಶ ಕೊಡಬೇಕು ಎಂದು ಕೋರಲಾಗಿತ್ತು.
ಆಯೋಗ ಇದಕ್ಕೆ ಒಪ್ಪಿಗೆ ನೀಡಿತ್ತು ಎಂದು ಹೇಳಲಾಗಿದೆ. 1997 ಮತ್ತು 2009ರಲ್ಲಿ ಮಿಜೋರಾಂನಲ್ಲಿ ನಡೆದ ಗಲಭೆ ಸಂದರ್ಭದಲ್ಲಿ ತ್ರಿಪುರಾಕ್ಕೆ ವಲಸೆ ಬಂದ ಬ್ರು ಸಮುದಾಯದ ಕೆಲವು ಕುಟುಂಬಗಳಷ್ಟೇ ಹಿಂದಿರುಗಿವೆ. ಉಳಿದವರು ಶಿಬಿರಗಳಲ್ಲಿಯೇ ಇದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.