ಮೆಹೋಬ (ಉತ್ತರಪ್ರದೇಶ) (ಪಿಟಿಐ) : ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಸೂಕ್ಷ್ಮವ್ಯಕ್ತಿ. ಅವರ ಹೇಳಿಕೆಯನ್ನು ತಿರುಚಲಾಗಿದೆ' ಎನ್ನುವ ಮೂಲಕ ಬಿಎಸ್ಪಿ ಸಂಸದ ವಿಜಯ ಬಹದ್ದೂರ್ ಅವರು 2002ರ ಕೋಮು ಗಲಭೆ ಸಂಬಂಧ `ನಾಯಿಮರಿ' ವಿವಾದಲ್ಲಿ ಸಿಲುಕಿರುವ ಮೋದಿ ಅವರ ಬೆಂಬಲಕ್ಕೆ ನಿಂತಿದ್ದಾರೆ.
`ಎಲ್ಲರೂ ತಮ್ಮದೇ ಆದ ದೃಷ್ಟಿಕೋನ ಹೊಂದಿರುತ್ತಾರೆ. ಆದರೆ ಮೋದಿ ಅವರ ಅಭಿಪ್ರಾಯವನ್ನು ತಪ್ಪಾಗಿ ಅರ್ಥೈಸಬಾರದು. ಅವರ ಹೇಳಿಕೆಗಳು ರಾಷ್ಟ್ರದ ಹಿತಾಸಕ್ತಿಯಿಂದ ಕೂಡಿವೆ. ಅವರು ಯಾವುದೇ ಸಮುದಾಯವನ್ನು ಉಲ್ಲೇಖಿಸುತ್ತಿಲ್ಲ. ರಾಜಕೀಯ ಹಿತಾಸಕ್ತಿಯಿಂದಾಗಿ ಅವರ ಅಭಿಪ್ರಾಯವನ್ನು ವಿರೋಧಿಸಲಾಗುತ್ತಿದೆ. ಅಂಥವರು ರಾಷ್ಟ್ರದ್ರೋಹಿಗಳು' ಎಂದು ಬಹದ್ದೂರ ಶನಿವಾರ ಪಿಟಿಐಗೆ ತಿಳಿಸಿದರು.
ನವದೆಹಲಿ ವರದಿ: ಈ ಮಧ್ಯೆ ಹಿಂದೂ ರಾಷ್ಟ್ರವಾದಿ ಮತ್ತು ನಾಯಿ ಮರಿ ವಿವಾದಕ್ಕೆ ಸಂಬಂಧಿಸಿದಂತೆ ಮೋದಿ ವಿರುದ್ಧ ಕಾಂಗ್ರೆಸ್, ಜೆಡಿಯು ಸೇರಿದಂತೆ ಹಲವು ರಾಜಕೀಯ ಪಕ್ಷಗಳು ಕಿಡಿಕಾರಿವೆ.
`ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜಿಸಬೇಡಿ. ನಾವೆಲ್ಲರೂ ಭಾರತೀಯರಲ್ಲವೇ ಎಂದು ಪ್ರಶ್ನಿಸುವ ಮೂಲಕ `ಹಿಂದೂ ರಾಷ್ಟ್ರವಾದಿ' ಎಂದು ಕರೆದುಕೊಂಡಿರುವ ನರೇಂದ್ರ ಮೋದಿ ಹೇಳಿಕೆಗೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರು ತಮ್ಮ ಟ್ವಿಟರ್ನಲ್ಲಿ ಶನಿವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆದರೆ `ಹೆಚ್ಚುತ್ತಿರುವ ಮೋದಿ ಜನಪ್ರಿಯತೆಯಿಂದ ಭಯಗೊಂಡಿರುವುದರಿಂದ ಕಾಂಗ್ರೆಸ್ ಪಕ್ಷವು ಅವರ ಹೇಳಿಕೆಯನ್ನು ತಿರುಚುತ್ತಿದೆ' ಎಂದು ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.