ಕಠ್ಮಂಡು(ಪಿಟಿಐ): ಪ್ರಪಂಚದ ಅತೀ ಎತ್ತರದ ಶಿಖರವೆಂದು ಪ್ರಖ್ಯಾತಿ ಪಡೆದಿರುವ ಮೌಂಟ್ ಎವರೆಸ್ಟ್ ನಲ್ಲಿ ಹಿಮಕುಸಿತ ಸಂಭವಿಸಿ 13 ಜನ ಮೃತರಾಗಿ ಹಲವರು ಗಾಯಗೊಂಡಿರುವ ಘಟನೆ ಶುಕ್ರವಾರ ಘಟಿಸಿತು.
ಮೃತರಲ್ಲಿ ಬಹುತೇಕ ಮಂದಿ ಶೆರ್ಪಾ ಮಾರ್ಗದರ್ಶಿಗಳಾಗಿದ್ದಾರೆ.
ಸುಮಾರು 5.800 ಅಡಿ ಎತ್ತರದಲ್ಲಿರುವ (ಯಾವುದೇ ಕ್ಷಣದಲ್ಲಾದರೂ ಕುಸಿಯಬಲ್ಲ, ಅತಿ ಹೆಚ್ಚು ಮಂಜು ಬೀಳುವ) ಕುಹುಂಭು ಪ್ರದೇಶದ ‘ಪಾಪ್ ಕಾರ್ನ್ ಸ್ಥಳ’ದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪರ್ವತಾರೋಹಿಗಳು ಮತ್ತು ನೇಪಾಳಿ ಮಾರ್ಗದರ್ಶಕರು ಬೇಸ್ ಕ್ಯಾಂಪ್ ನಿಂದ ಎವರೆಸ್ಟ್ ಶಿಖರಕ್ಕೆ ಹೋಗುತ್ತಿದ್ದ ವೇಳೆ ಹಿಮಪಾತವಾಗಿದೆ ಎನ್ನಲಾಗಿದೆ. ಮೃತರಲ್ಲಿ ಬಹುತೇಕ ಮಂದಿ ನೇಪಾಳೀಯರು ಎನ್ನಲಾಗಿದೆ.
‘13 ಮೃತದೇಹಗಳು ದೊರಕಿದ್ದು ಅವುಗಳಲ್ಲಿ ಐದನ್ನು ಮಂಜಿನಲ್ಲಿ ಸಮಾಧಿ ಮಾಡಲಾಯಿತು ಎಂದು ಪೀಸ್ ನೇಪಾಳ್ ಟ್ರೆಕ್ಸ್ ನ ಕಾರ್ಯನಿರ್ವಾಹಕ ನಿರ್ದೇಶಕ ಜೀವನ್ ಘಿಮೈರ್ ತಿಳಿಸಿದ್ದಾರೆ. ಇನ್ನೂ ಏಳು ಮಂದಿ ಕಣ್ಮರೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ಘಟನೆಯಲ್ಲಿ ಎಂಟು ಜನರನ್ನು ರಕ್ಷಿಸಿ, ಚಿಕಿತ್ಸೆಗಾಗಿ ಬೇಸ್ ಕ್ಯಾಂಪ್ ಗೆ ಕರೆತರಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ಕಠ್ಮಂಡುವಿನಿಂದ ಹೆಲಿಕಾಫ್ಟರ್ ಅನ್ನು ಎವರೆಸ್ಟ್ ಗೆ ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.