ನವದೆಹಲಿ: ಆಡಳಿತಾರೂಢ ಬಿಜೆಪಿ 2019ರ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಬಿಜೆಪಿಯ ಅಧೀನ ಸಂಘಟನೆಗಳು ತಕ್ಷಣದಿಂದಲೇ ತಳಮಟ್ಟದಲ್ಲಿ ಕೆಲಸ ಆರಂಭಿಸುವಂತೆ ಪಕ್ಷದ ಮುಖಂಡರು ಸೂಚಿಸಿದ್ದಾರೆ.
ಮೊದಲ ಬಾರಿಗೆ ಮತದಾನ ಮಾಡಲು ಅರ್ಹತೆ ಪಡೆದ ಯುವ ಜನರ ಹೆಸರನ್ನು ಮತದಾರರ ಪಟ್ಟಿಯಲ್ಲಿ ನೋಂದಣಿ ಮಾಡಿಸುವ ಮೂಲಕ ಕೆಲಸ ಆರಂಭಿಸಬೇಕು. ಚಿಂತಕರು ಮತ್ತು ಪ್ರಭಾವಿ ವ್ಯಕ್ತಿಗಳನ್ನು ಪಕ್ಷಕ್ಕೆ ಸೆಳೆಯಬೇಕು ಎಂದು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಸೂಚಿಸಲಾಗಿದೆ.
ವಿವಿಧ ಅಧೀನ ಸಂಘಟನೆಗಳು ಯಾವ ಜವಾಬ್ದಾರಿಗಳನ್ನು ವಹಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಥೂಲ ಕಾರ್ಯತಂತ್ರವನ್ನು ಕಾರ್ಯಕಾರಿಣಿಯಲ್ಲಿ ರೂಪಿಸಲಾಗಿದೆ.
ಕಾರ್ಯಕಾರಿಣಿಯ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು. ಪಕ್ಷದ ಗುರಿಗಳನ್ನು ವಿವರಿಸಿದ ಅವರು, ಅಧಿಕಾರದಲ್ಲಿದ್ದಾಗ ಜನಸೇವೆಯೇ ಪಕ್ಷದ ಗುರಿ ಎಂದರು.
ಪಕ್ಷದ ಅಧ್ಯಕ್ಷ ಅಮಿತ್ ಶಾ ಅವರು ಉಪಸ್ಥಿತರಿದ್ದರು.
ಅಧೀನ ಸಂಘಟನೆಗಳಿಗೆ ಮುಂದಿನ ಒಂದು ವರ್ಷ ನೆಲೆ ವಿಸ್ತರಣೆಯ ಕೆಲಸ ವಹಿಸಲಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಭೂಪೇಂದರ್ ಯಾದವ್ ಹೇಳಿದರು.
ಕಾರ್ಯಕಾರಿಣಿಯ ಬಳಿಕ ಯಾದವ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು. ಜನರನ್ನು ಪಕ್ಷಕ್ಕೆ ಆಕರ್ಷಿಸಲು ವಿವಿಧ ಸಂಘಟನೆಗಳು ತಮ್ಮದೇ ಆದ ಕಾರ್ಯತಂತ್ರಗಳನ್ನು ರೂಪಿಸುವಂತೆ ಸೂಚಿಸಲಾಗಿದೆ. 18 ವರ್ಷ ತುಂಬಿದವರನ್ನು ಗರಿಷ್ಠ ಸಂಖ್ಯೆಯಲ್ಲಿ ಮತದಾರರ ಪಟ್ಟಿಗೆ ನೋಂದಣಿ ಮಾಡಿಸಲು ಸೂಚಿಸಲಾಗಿದೆ ಎಂದು ಯಾದವ್ ತಿಳಿಸಿದ್ದಾರೆ.
‘ಕೆಲವು ಪಕ್ಷಗಳಲ್ಲಿ ಕುಟುಂಬವೇ ಮೊದಲು ಆಗಿರಬಹುದು. ಆದರೆ ಬಿಜೆಪಿಗೆ ದೇಶವೇ ಮೊದಲು. ಪರಿವಾರವಾದಿಗಳು ಸೋಲುತ್ತಿದ್ದಾರೆ. ದೇಶದ ಜನರು ಈಗ ಪರಿಶ್ರಮವಾದಿಗಳಿಗೆ ಬೆಂಬಲ ನೀಡುತ್ತಿದ್ದಾರೆ’ ಎಂದು ಪ್ರಧಾನಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.