ನವದೆಹಲಿ (ಪಿಟಿಐ): ರಾಷ್ಟ್ರದ ಎಲ್ಲ ವರ್ಗದ ಜನರಿಗೆ ಆರೋಗ್ಯ ರಕ್ಷಣೆ ಒದಗಿಸುವ ತನ್ನ ಯೋಜನೆಗಾಗಿ ಹೊಸ ತೆರಿಗೆ ವಿಧಿಸುವಂತೆ ಯೋಜನಾ ಸಮಿತಿಯ ಕಾರ್ಯ ಪಡೆ ಶಿಫಾರಸು ಮಾಡಿದೆ.
ಆರೋಗ್ಯ ರಕ್ಷಣೆ ಕುರಿತ ಉನ್ನತ ಮಟ್ಟದ ಕಾರ್ಯಪಡೆಯು ಸಮಾಜದ ಎಲ್ಲಾ ವರ್ಗಗಳಿಗೆ ಉಚಿತವಾಗಿ ಆರೋಗ್ಯ ರಕ್ಷಣೆ ನೀಡುವ ಗುರಿ ಹೊಂದಿದೆ. ಇದಕ್ಕೆ ಹಣಕಾಸು ಒದಗಿಸಲು ಭಾರತದಲ್ಲಿ ಸಾಮಾನ್ಯ ತೆರಿಗೆ ಪದ್ಧತಿಯನ್ನು ಪ್ರಧಾನ ಮೂಲವಾಗಿ ಬಳಸಲು ಉದ್ದೇಶಿಸಿದೆ. ತೆರಿಗೆ ಪಾವತಿದಾರರು ಮತ್ತು ವೇತನದಾರರಿಂದ ಕಡ್ಡಾಯವಾಗಿ ಹೆಚ್ಚುವರಿಯಾಗಿ ಹಣ ಕಡಿತಗೊಳಿಸಲು ಆಲೋಚಿಸಿದೆ.
ಸಮಿತಿಯ ಈ ವರದಿ ಈಗ ಯೋಜನಾ ಆಯೋಗದ ಪರಿಶೀಲನೆಯಲ್ಲಿದೆ.
`ಆರೋಗ್ಯದ ಮೇಲಿನ ಸಾರ್ವಜನಿಕ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯಗಳೆರಡೂ ಸೇರಿ ಹೆಚ್ಚಿಸಬೇಕು. ಈಗ ಜಿಡಿಪಿಯ ಶೇ. 1.2 ರಷ್ಟು ಇರುವ ಈ ಮೊತ್ತವನ್ನು 12ನೇ ಪಂಚವಾರ್ಷಿಕ ಯೋಜನೆ ಕೊನೆ ವೇಳೆಗೆ ಕನಿಷ್ಠ ರೂ 2.5ಕ್ಕೆ ಹೆಚ್ಚಿಸಬೇಕು ಮತ್ತು 2022ರ ವೇಳೆಗೆ ಜಿಡಿಪಿಯ ಕನಿಷ್ಠ ಶೇಕಡಾ 3ರಷ್ಟು ಮೊತ್ತವನ್ನಾದರೂ ಹೆಚ್ಚಿಸಬೇಕು~ ಎಂದು ಸಮಿತಿ ಶಿಫಾರಸು ಮಾಡಿದೆ.
ಭಾರತದಲ್ಲಿ ಬಡತನ ಕಡಿಮೆ ಮಾಡಲು ಆರೋಗ್ಯ ಕುರಿತ ಸಾರ್ವಜನಿಕ ವೆಚ್ಚವನ್ನು ಹೆಚ್ಚಿಸಬೇಕು ಎಂದು ಹೃದ್ರೋಗ ತಜ್ಞ ಕೆ. ಶ್ರೀನಾಥ್ ರೆಡ್ಡಿ ನೇತೃತ್ವದ ತಜ್ಞರ ಸಮಿತಿಯು ಯೋಜನಾ ಆಯೋಗಕ್ಕೆ ಸಲ್ಲಿಸಿದ ತನ್ನ ವರದಿಯಲ್ಲಿ ವಾದಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.