ADVERTISEMENT

ರಾಜ್ಯಕ್ಕೆ ಸಾವಿರ ಕೋಟಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 18:40 IST
Last Updated 25 ಫೆಬ್ರುವರಿ 2011, 18:40 IST

ನವದೆಹಲಿ: ಪ್ರಸಕ್ತ ರೈಲ್ವೆ ಬಜೆಟ್‌ನಲ್ಲಿ ರಾಜ್ಯದ ಯೋಜನೆಗಳಿಗೆ ಸುಮಾರು ಸಾವಿರ ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ.

ಹೊಸದಾಗಿ ಪ್ರಕಟಿಸಲಾಗಿರುವ ತುಮಕೂರು- ದಾವಣಗೆರೆ, ವೈಟ್‌ಫೀಲ್ಡ್- ಕೋಲಾರ ಹಾಗೂ  ಶಿವಮೊಗ್ಗ- ಹರಿಹರ ಯೋಜನೆಗಳಿಗೆ ಕೇವಲ ಒಂದು ಕೋಟಿ ರೂಪಾಯಿ ನಿಗದಿ ಮಾಡಲಾಗಿದೆ. ಇದು ಕೇವಲ ಸಾಂಕೇತಿಕ. ಯೋಜನೆ ಕೆಲಸ ಆರಂಭವಾದ ಬಳಿಕ ಹೆಚ್ಚಿನ ಹಣ ಬಿಡುಗಡೆ ಆಗಲಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್. ಮುನಿಯಪ್ಪ ಪತ್ರಕರ್ತರಿಗೆ ತಿಳಿಸಿದರು.

 ಸುಮಾರು 200 ಕಿ.ಮೀ. ದೂರದ ತುಮಕೂರು- ದಾವಣಗೆರೆ ಮಾರ್ಗದ ಅಂದಾಜು ವೆಚ್ಚ 913 ಕೋಟಿ, ಶಿವಮೊಗ್ಗ- ಹರಿಹರದ ಅಂದಾಜು ವೆಚ್ಚ 562ಕೋಟಿ, ವೈಟ್‌ಫೀಲ್ಡ್- ಕೋಲಾರ ಮಾರ್ಗದ ಅಂದಾಜು ವೆಚ್ಚ 341 ಕೋಟಿ.
ಹೊಸ ಮಾರ್ಗಗಳಿಗೆ ಸುಮರು 200 ಕೋಟಿ, ಗೇಜ್ ಪರಿವರ್ತನೆಗೆ 40ಕೋಟಿ, ಜೋಡಿ ಮಾರ್ಗಕ್ಕೆ 572ಕೋಟಿ, ವಿದ್ಯುದ್ದೀಕರಣಕ್ಕೆ 63.10ಕೋಟಿ ಬಜೆಟ್‌ನಲ್ಲಿ ನಿಗದಿ ಮಾಡಲಾಗಿದೆ. ಹೋದ ಬಜೆಟ್‌ನಲ್ಲಿ ಸುಮಾರು 550ಕೋಟಿ ಕೊಡಲಾಗಿತ್ತು,

ರಾಜ್ಯಕ್ಕೆ ಮೊದಲ ಬಾರಿಗೆ ಇಷ್ಟೊಂದು ಸೌಲಭ್ಯಗಳು ದೊರೆತಿವೆ. ಇದಕ್ಕಾಗಿ ಪ್ರಧಾನಿ, ಯುಪಿಎ ಅಧ್ಯಕ್ಷರು ಮತ್ತು ರೈಲ್ವೆ ಸಚಿವರಿಗೆ ಅಭಿನಂದನೆ ಸಲ್ಲಿಸುವುದಾಗಿ ಮುನಿಯಪ್ಪ ತಿಳಿಸಿದರು, ದಕ್ಷಿಣದ ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರೈಲು ಯೋಜನೆಗಳಲ್ಲಿ ಮುಂಚೂಣಿಯಲ್ಲಿದೆ ಎಂದರು.

ಇದಕ್ಕೂ ಮೊದಲು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ ಕರ್ನಾಟಕ ಕಬ್ಬಿಣ ಅದಿರು ಸಾಗಣೆ ಮೇಲೆ ನಿರ್ಬಂಧ ಹೇರಿರುವುದರಿಂದ ರೈಲ್ವೆಗೆ ಸುಮಾರು ಎರಡು ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.