ನವದೆಹಲಿ: ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿ 17 ರಾಜ್ಯಗಳಲ್ಲಿ ತೆರವಾಗಲಿರುವ 59 ರಾಜ್ಯಸಭಾ ಸ್ಥಾನಗಳಿಗೆ ಮಾರ್ಚ್ 23ರಂದು ಚುನಾವಣೆ ನಡೆಯಲಿದೆ.
ಕರ್ನಾಟಕದಿಂದ ರಾಜೀವ್ ಚಂದ್ರಶೇಖರ್ (ಪಕ್ಷೇತರ), ಕೆ. ರೆಹಮಾನ್ ಖಾನ್ (ಕಾಂಗ್ರೆಸ್), ಬಸವರಾಜ್ ಪಾಟೀಲ್ ಮತ್ತು ರಂಗಸಾಯಿ ರಾಮಕೃಷ್ಣ (ಇಬ್ಬರೂ ಬಿಜೆಪಿ) ಅವರು ಪ್ರತಿನಿಧಿಸುತ್ತಿರುವ ಸ್ಥಾನಗಳು ತೆರವಾಗಲಿವೆ. ವಿಧಾನಸಭೆಯ ಈಗಿನ ಬಲಾಬಲ ಪ್ರಕಾರ, ಕಾಂಗ್ರೆಸ್ಗೆ ಎರಡು ಸ್ಥಾನಗಳನ್ನು ಗೆಲ್ಲುವ ಅವಕಾಶ ಇದೆ. ಉಳಿದ ಎರಡು ಸ್ಥಾನಗಳಿಗೆ ಪೈಪೋಟಿ ನಡೆಯಲಿದೆ.
ಉತ್ತರ ಪ್ರದೇಶದಿಂದ ಅತಿ ಹೆಚ್ಚು ಎಂದರೆ, ಹತ್ತು ಮಂದಿ ನಿವೃತ್ತರಾಗುತ್ತಿದ್ದಾರೆ. ನಿವೃತ್ತರಾಗುತ್ತಿರುವವರಲ್ಲಿ ನಟಿ ಜಯಾ ಬಚ್ಚನ್ ನಟ ಚಿರಂಜೀವಿ, ರೇಣುಕಾ ಚೌಧರಿ, ವಿನಯ ಕಟಿಯಾರ್ ಇದ್ದಾರೆ.
ಬಿಹಾರ, ಮಹಾರಾಷ್ಟ್ರದಲ್ಲಿ ತಲಾ ಆರು, ಮಧ್ಯ ಪ್ರದೇಶ ಮತ್ತು ಪಶ್ಚಿಮ ಬಂಗಾಳದಲ್ಲಿ ತಲಾ ಐದು, ಗುಜರಾತ್ನಲ್ಲಿ ನಾಲ್ಕು, ಆಂಧ್ರ ಪ್ರದೇಶ, ತೆಲಂಗಾಣ, ಒಡಿಶಾ ಮತ್ತು ರಾಜಸ್ಥಾನದಲ್ಲಿ ತಲಾ ಮೂರು ಸ್ಥಾನಗಳು ತೆರವಾಗಲಿವೆ.
ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅತಿ ಹೆಚ್ಚು ಲಾಭವಾಗಲಿದೆ. ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ಬಹುತೇಕ ಸ್ಥಾನಗಳನ್ನು ಗೆಲ್ಲುವ ಸಾಮರ್ಥ್ಯ ಬಿಜೆಪಿಗೆ ಇದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.