ADVERTISEMENT

ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿದ `ವಂಜಾರಾ' ಆರೋಪ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 19:59 IST
Last Updated 5 ಸೆಪ್ಟೆಂಬರ್ 2013, 19:59 IST

ನವದೆಹಲಿ (ಪಿಟಿಐ): ಒಂದು ಕಾಲದ ಪರಮಾಪ್ತರಾದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಮಾಜಿ ಗೃಹ ಸಚಿವ ಅಮಿತ್ ಷಾ ವಿರುದ್ಧ ನಕಲಿ ಎನ್‌ಕೌಂಟರ್ ಕುಖ್ಯಾತಿಯ ಡಿ.ಜಿ. ವಂಜಾರಾ ಮಾಡಿರುವ ಗುರುತರ ಆರೋಪಗಳು ಗುರುವಾರ ರಾಜ್ಯಸಭೆಯಲ್ಲೂ ಪ್ರತಿಧ್ವನಿಸಿದವು.

ಸದನ ಸೇರುತ್ತಿದ್ದಂತೆಯೇ ಜೆಡಿಯು, ಸಮಾಜವಾದಿ ಮತ್ತು ಎಡ ಪಕ್ಷಗಳ ಸದಸ್ಯರು, ಗುಜರಾತ್ ಸರ್ಕಾರ ಮತ್ತು ಮೋದಿ ವಿರುದ್ಧ ವಂಜಾರಾ ಮಾಡಿರುವ ಆರೋಪಗಳ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ಒತ್ತಾಯಿಸಿ ಘೋಷಣೆ ಕೂಗಿದರು.

ಚರ್ಚೆಗೆ ಅವಕಾಶ ನೀಡುವಂತೆ ಸಿಪಿಐ ನಾಯಕ ಸೀತಾರಾಂ ಯೆಚೂರಿ ಮಂಡಿಸಿದ ಬೇಡಿಕೆಯನ್ನು ಉಪಸಭಾಪತಿ ಪಿ.ಜೆ. ಕುರಿಯನ್ ತಳ್ಳಿ ಹಾಕಿದರು. ಇದನ್ನು ವಿರೋಧಿಸಿ ಎಡಪಕ್ಷಗಳು ಸದಸ್ಯರು ಕಲಾಪ ಬಹಿಷ್ಕರಿಸಿ ಹೊರ ನಡೆದರು. ಉಳಿದ ಸದಸ್ಯರು `ವಂಜಾರಾ, ವಂಜಾರಾ' ಎಂದು ಘೋಷಣೆ ಕೂಗುತ್ತ ಪ್ರತಿಭಟನೆ ಮುಂದುವರಿಸಿದಾಗ ಕಲಾಪ ಮುಂದೂಡಲಾಯಿತು.

ಮಾಯಾ ಬೇಡಿಕೆ: ಗುಜರಾತ್ ಸರ್ಕಾರ, ಮುಖ್ಯಮಂತ್ರಿ ಮೋದಿ, ಅಮಿತ್ ಷಾ ವಿರುದ್ಧ ವಂಜಾರಾ ಮಾಡಿರುವ ಗಂಭೀರ ಆರೋಪಗಳ ಕುರಿತು ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಒತ್ತಾಯಿಸಿದ್ದಾರೆ. ಉಭಯ ಸದನಗಳಲ್ಲೂ ಈ ವಿಷಯ ಚರ್ಚಿಸಲು ಅವಕಾಶ ನೀಡುವಂತೆ ಕೋರಿದ ಮಾಯಾ, ತನಿಖೆಯನ್ನು ಸಿಬಿಐಗೆ ವಹಿಸಿದರೆ ಉತ್ತಮ ಎಂದು ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.