ಡೆಹ್ರಾಡೂನ್ (ಪಿಟಿಐ): ಎರಡು ದಿನಗಳ ಹಿಂದೆ ಉಪವಾಸ ಕೈಬಿಟ್ಟಿದ್ದ ಬಾಬಾ ರಾಮದೇವ್ ಅವರು ಇಲ್ಲಿನ ಹಿಮಾಲಯನ್ ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆಯಾಗಿದ್ದಾರೆ.
~ಭ್ರಷ್ಟಾಚಾರದ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಾನೇನು ಪಾಪ ಮಾಡಿಲ್ಲ~ ಎಂದಿರುವ ಬಾಬಾ ಅವರು, ~ವಿದೇಶದಲ್ಲಿರುವ ಕಪ್ಪುಹಣ ಭಾರತಕ್ಕೆ ಮರಳಿ ತರುವ ಕುರಿತ ತಮ್ಮ ಹೋರಾಟವನ್ನು ಮುಂದುವರೆಸುವೆ~ ಎಂದು ಹೇಳಿದರು.
ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಬಾಬಾ ಅವರು, ~ಸಂಸತ್ತು ಮತ್ತು ವಿಧಾನಸಭಗೆ ಕಳಂಕರಹಿತ ಪ್ರತಿನಿದಿಗಳು ಆಯ್ಕೆಯಾಗಬೇಕು ಹಾಗೂ ವಿದೇಶದಲ್ಲಿ ಕೂಡಿಟ್ಟಿರುವ 4 ಲಕ್ಷ ಕೋಟಿ ರೂಪಾಯಿ ಕಪ್ಪುಹಣವನ್ನು ಭಾರತಕ್ಕೆ ಮರಳಿ ತರಬೇಕೆಂಬುದು ನನ್ನ ಬಯಕೆ~ ಎಂದು ಹೇಳಿದರು
~ಭ್ರಷ್ಟಾಚಾರದ ವಿರುದ್ಧ ಮತ್ತು ವಿದೇಶದಲ್ಲಿನ ಕಪ್ಪು ಹಣ ಭಾರತಕ್ಕೆ ಮರಳಿ ತರಬೇಕೆಂದು ಹೋರಾಟ ಮಾಡಿ ನಾನು ಯಾವುದೇ ಪಾಪ ಮಾಡಿಲ್ಲ. ಜನತೆಯ ಸಹಕಾರದಿಂದ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಉಸಿರುವವರೆಗೂ ನಡೆಸುವೆ~ ಎಂದು ಅವರು ತಿಳಿಸಿದರು.
ತಮ್ಮ ಬೆಂಬಲಿಗರೊಂದಿಗೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ಸತ್ಯಾಗ್ರಹ ಮಾಡುತ್ತಿದ್ದಾಗ ನಡೆದ ಪೋಲಿಸ್ ದೌರ್ಜನ್ಯವನ್ನು ಖಂಡಿಸಿದ ಅವರು, ~ನನ್ನ ಬೆಂಬಲಿಗರು ಎದುರಿಸಿದ ತೊಂದರೆಗಳೂ ವ್ಯರ್ಥವಾಗುವುದಿಲ್ಲ~ ಎಂದರು. ~ಪ್ರಸಕ್ತ ಭ್ರಷ್ಟ ವ್ಯವಸ್ಥೆಯಲ್ಲಿ ಸಂಪೂರ್ಣ ಬದಲಾವಣೆ ಕಾಣುವಿರಿ~ ಎಂದೂ ಅವರು ಭರವಸೆ ವ್ಯಕ್ತಪಡಿಸಿದರು.
ಶ್ರೀ ರವಿಶಂಕರ್ ಗುರೂಜಿ ಮತ್ತು ಇತರ ಗಣ್ಯರ ಮನವಿ ಮನ್ನಸಿ, ಭ್ರಷ್ಟಾಚಾರ ತಡೆಗೆ ಕಠಿಣವಾದ ಕಾನೂನು ಜಾರಿಗಾಗಿ ಒತ್ತಾಯಿಸಿ ತಾವು ಜೂನ್ 4ರಂದು ಆರಂಭಿಸಿದ ತಮ್ಮ 9 ದಿನಗಳ ಉಪವಾಸ ಸತ್ಯಾಗ್ರಹವನ್ನು ಬಾಬಾ ರಾಮದೇವ್ ಅವರು ಜೂನ್ 11ರಂದು ಕೊನೆಗೊಳಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.