ಮಲ್ಲಿಕ್ ಭೇಟಿ ರದ್ದತಿಗೆ ಸೂಚನೆ
ನವದೆಹಲಿ (ಪಿಟಿಐ): ಪಾಕಿಸ್ತಾನದ ಅಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲ್ಲಿಕ್ ಅವರು ಭಾರತ ಭೇಟಿಯನ್ನು ರದ್ದುಗೊಳಿಸಬೇಕು ಎಂಬ ಸಂದೇಶವನ್ನು ಭಾರತ ರಾಜತಾಂತ್ರಿಕ ಮಾರ್ಗಗಳ ಮೂಲಕ ಪಾಕಿಸ್ತಾನಕ್ಕೆ ರವಾನಿಸಿದೆ.
ಭಾರತ- ಪಾಕ್ ನಡುವಿನ ಹೊಸ ವೀಸಾ ನೀತಿಗೆ ಸಂಬಂಧಿಸಿದ ನಿಯಮಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಪಾಕಿಸ್ತಾನದ ಸಚಿವರು ಇದೇ ನ. 22 ಮತ್ತು 23ರಂದು ನವದೆಹಲಿಗೆ ಭೇಟಿ ನೀಡಬೇಕಿತ್ತು. ಸಂಸತ್ತಿನ ಚಳಿಗಾಲದ ಅಧಿವೇಶನ ಇದೇ 22ರಿಂದ ಪ್ರಾರಂಭವಾಗುವುದರಿಂದ ಮತ್ತು ಮುಂಬೈ ಮೇಲಿನ ದಾಳಿಯ ಸಂಚುಕೋರರ ವಿರುದ್ಧ ಪಾಕ್ ಯಾವುದೇ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಭಾರತ ಮಲ್ಲಿಕ್ ಅವರ ಭೇಟಿಯನ್ನು ನಿರಾಕರಿಸಿದೆ.
ಛಡ್ಡಾ ಹತ್ಯೆ: ದೆಹಲಿಗೆ ಪೊಲೀಸರು
ಡೆಹ್ರಾಡೂನ್ (ಪಿಟಿಐ): ಪಾಂಟಿ ಛಡ್ಡಾ ಮತ್ತು ಅವರ ತಮ್ಮ ಹರ್ದೀಪ್ ಛಡ್ಡಾ ಹತ್ಯೆ ಪ್ರಕರಣದಲ್ಲಿ ರಾಜ್ಯದ ಪೊಲೀಸ್ ಕಾನ್ಸ್ಟೇಬಲ್ ಒಬ್ಬರ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ ಪೊಲೀಸ್ ಇಲಾಖೆಯು ಪೊಲೀಸರ ತಂಡವೊಂದನ್ನು ನವದೆಹಲಿಗೆ ಕಳುಹಿಸಿದೆ.
ಈ ಪ್ರಕರಣದಲ್ಲಿ ಸಚಿನ್ ತ್ಯಾಗಿ ಎಂಬ ಕಾನ್ಸ್ಟೇಬಲ್ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿರುವುದರಿಂದ, ಸತ್ಯಾಸತ್ಯತೆಯನ್ನು ತಿಳಿಯುವುದಕ್ಕಾಗಿ ಪೊಲೀಸರ ತಂಡವೊಂದನ್ನು ದೆಹಲಿಗೆ ಕಳುಹಿಸಲಾಗಿದೆ ಎಂದು ಉತ್ತರಾಖಂಡ ಡಿಜಿಪಿ ಹೇಳಿದ್ದಾರೆ.
`ಅಧಿವೇಶನ ಯುಪಿಎಗೆ ಸೆಮಿಫೈನಲ್~
ಜೈಪುರ (ಪಿಟಿಐ): ಯುಪಿಎ ಸರ್ಕಾರವು ಪ್ರಜಾಸತ್ತಾತ್ಮಕವಲ್ಲದ ಅನೇಕ ನಿರ್ಧಾರಗಳನ್ನು ಕೈಗೊಂಡಿದ್ದು ಮುಂಬರುವ ಬಜೆಟ್ ಅಧಿವೇಶನವು ಅದರ `ಕೊನೆಯ ಅಧಿವೇಶನ~ ಆಗಲಿದೆ ಎಂದು ಬಿಜೆಪಿ ಹೇಳಿದೆ.
`ಚಳಿಗಾಲದ ಅಧಿವೇಶನ ಸರ್ಕಾರಕ್ಕೆ `ಸೆಮಿಫೈನಲ್~ ಆಗಲಿದೆ~ ಎಂದು ಮುಖಂಡ ಮುಖ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
`ಭಯೋತ್ಪಾದಕರ ವಿರುದ್ಧ ನಿರಂತರ ಕ್ರಮ ಅಗತ್ಯ~
ನವದೆಹಲಿ (ಪಿಟಿಐ): ಉಗ್ರರ ವಿರುದ್ಧ ಪಾಕಿಸ್ತಾನವು ನಿರಂತರವಾಗಿ ಕ್ರಮ ಕೈಗೊಳ್ಳುವುದನ್ನು ಅಮೆರಿಕ ಬಯಸುತ್ತದೆ ಎಂದು ಅಮೆರಿಕದ ರಾಯಭಾರಿ ನ್ಯಾನ್ಸಿ ಜೆ ಪೊವೆಲ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.