ನವದೆಹಲಿ: ಪಾಕಿಸ್ತಾನಕ್ಕೆ ಬರುವಂತೆ ಕೇವಲ ಪ್ರಧಾನಿ ಮನಮೋಹನ್ ಸಿಂಗ್ಗೆ ಮಾತ್ರ ಆಹ್ವಾನ ಸಿಕ್ಕಿಲ್ಲ, ಕಾಂಗ್ರೆಸ್ ಯುವನಾಯಕ ರಾಹುಲ್ ಗಾಂಧಿ ಸಹ ಈ ಗೌರವಕ್ಕೆ ಪಾತ್ರರಾಗಿದ್ದಾರೆ.
ಆದರೆ, ರಾಹುಲ್ಗೆ ಈ ಆಹ್ವಾನ ನೀಡಿದವರು ಬಿಲಾವಲ್ ಭುಟ್ಟೊ ಜರ್ದಾರಿ. ಭಾರತೀಯ ನಾಯಕರ ಜತೆ ಭೋಜನಕೂಟದಲ್ಲಿ ಪಾಲ್ಗೊಂಡಿದ್ದ ಬಿಲಾವಲ್ ಇಸ್ಲಾಮಾಬಾದ್ಗೆ ಬರುವಂತೆ ರಾಹುಲ್ಗೆ ಆಹ್ವಾನವಿತ್ತರು.
ರಾಹುಲ್ ಸಹ ತಡಮಾಡದೇ ಈ ಆಹ್ವಾನ ಒಪ್ಪಿಕೊಂಡರು. ಹೊಸ ಪೀಳಿಗೆಯ ಈ ನಾಯಕರಿಬ್ಬರೂ ಕೇವಲ ಊಟದ ಸಮಯದಲ್ಲಿ ಮಾತುಕತೆ ನಡೆಸಲಿಲ್ಲ. ಜರ್ದಾರಿ ಮತ್ತು ಪ್ರಧಾನಿ ಸಿಂಗ್ ನಡುವಿನ 40 ನಿಮಿಷಗಳ ಮಾತುಕತೆ ಸಂದರ್ಭದಲ್ಲಿ ಈ ಇಬ್ಬರೂ ಸಹ ಚಿಕ್ಕ ಸಭೆ ನಡೆಸಿದರು.
ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ 23 ವರ್ಷದ ಯುವ ಅಧ್ಯಕ್ಷ ಬಿಲಾವಲ್ ತಮ್ಮ ಟ್ವಿಟರ್ ಅನುಯಾಯಿಗಳಿಗೆ ಈ ಪ್ರವಾಸದ ಕುರಿತು ಮಾಹಿತಿ ನೀಡುತ್ತಲೇ ಇದ್ದರು. ಟ್ವಿಟರ್ ಪ್ರೇಮಿಯಾದ ಅವರು ರಾಹುಲ್ ಮತ್ತು ಸಿಂಗ್ ಜತೆಗಿನ ಭೋಜನವನ್ನು ತಾವು ಆನಂದಿಸಿದ್ದಾಗಿ ಟ್ವಿಟ್ ಮಾಡಿದರು.
ಮಧ್ಯಾಹ್ನ 12.30ಕ್ಕೆ ಭಾರತಕ್ಕೆ ಬಂದಿಳಿದ ತಕ್ಷಣ, `ಭಾರತವೇ ನಿನ್ನ ಜತೆ ಶಾಂತಿಯಿರಲಿ. ನಾನು ದೆಹಲಿಗೆ ಈಗಷ್ಟೇ ಬಂದಿಳಿದಿದ್ದೇನೆ. ಮೊಟ್ಟಮೊದಲ ಭೇಟಿ ಇದು~ ಎಂದು ಸಂದೇಶ ಕಳುಹಿಸಿದರು. ಅಜ್ಮೇರ್ನ ಖ್ವಾಜಾ ಮೊಯಿನುದ್ದೀನ್ ಚಿಸ್ತಿ ದರ್ಗಾಕ್ಕೆ ತೆರಳುವ ಮುನ್ನ ಜೈಪುರದಲ್ಲಿ, `ನಾನು ಮತ್ತು ಅಧ್ಯಕ್ಷರು ರಾಹುಲ್ ಗಾಂಧಿ ಹಾಗೂ ಪ್ರಧಾನಿ ಸಿಂಗ್ ಜತೆಗಿನ ಭೋಜನ ಸವಿದೆವು. ಪರಸ್ಪರರಿಂದ ಕಲಿಯುವುದು ಸಾಕಷ್ಟಿದೆ~ ಎಂದು ಬರೆದರು.
ಟ್ವಿಟರ್ನಲ್ಲಿ 1,400 ಗೆಳೆಯರನ್ನು ಹೊಂದಿರುವ ಬಿಲಾವಲ್ ತಮ್ಮ ದಿನಚರಿಯ ವಿವರವನ್ನು ಟ್ವಿಟರ್ನಲ್ಲಿ ನೀಡುತ್ತಲೇ ಇದ್ದರು. ಪಾಲಂ ವಾಯ ನೆಲೆಯಲ್ಲಿ ತಮ್ಮನ್ನು ಸ್ವಾಗತಿಸಲು ಬಂದಿದ್ದ ಅಧಿಕಾರಿಗಳೊಂದಿಗೆ ನಗುತ್ತಲೇ ಹಸ್ತಲಾಘವ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.