ಹುಮನಾಬಾದ್: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 9ರ ಹುಡಗಿ ಗ್ರಾಮದಲ್ಲಿನ ಸ್ಟೇಟ್ ಬ್ಯಾಂಕ್ ಆಫ್ ಹೈದರಾಬಾದ್ನ ಶಾಖೆಯ ಕಿಟಕಿ ಮುರಿದು ರೂ.7 ಲಕ್ಷ ನಗದು ಮತ್ತು ಸುಮಾರು ರೂ.43 ಲಕ್ಷ ಮೌಲ್ಯದ ಆಭರಣ ದೋಚಿರುವ ಕೃತ್ಯ ಶುಕ್ರವಾರ ಮಧ್ಯರಾತ್ರಿ ನಡೆದಿದೆ.
ಬ್ಯಾಂಕ್ ಕಟ್ಟಡದ ಪಕ್ಕದ ಹೊಲದ ಬಳಿಯಿಂದ ಕಿಟಕಿ ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು ಒಟ್ಟು ರೂ.50 ಲಕ್ಷ ಮೌಲ್ಯದ ನಗದು, ಆಭರಣ ದೋಚಿದ್ದಾರೆ ಎಂದು ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಬ್ಯಾಂಕ್ನ ಒಳಗೆ ಐದು ಸಿಸಿ ಕ್ಯಾಮರಾ ಇದ್ದು, ಈ ಪೈಕಿ ದುಷ್ಕ ರ್ಮಿಗಳು ತಾವು ಗಮನಿಸಿದ ಮೂರು ಕ್ಯಾಮರಾಗಳನ್ನು ಛಾವಣಿಯತ್ತ ತಿರುಗಿಸಿದ್ದಾರೆ. ಅವರ ಗಮನಕ್ಕೆ ಬಾರದ ಇತರ ಎರಡು ಕ್ಯಾಮರಾಗಳಲ್ಲಿ ಅವರ ಚಟುವಟಿಕೆಗಳು ದಾಖಲಾಗಿವೆ.
ಇಬ್ಬರು ದುಷ್ಕರ್ಮಿಗಳು ಶಾಖೆಯ ಒಳ ನುಗ್ಗಿದ್ದು, ಇಬ್ಬರೂ ಮುಸುಕು ಧಾರಿಗಳಾಗಿದ್ದ ಕಾರಣ ಅವರ ಗುರುತು ಪತ್ತೆಯಾಗಿಲ್ಲ. ಅಲ್ಲದೆ ಕಟ್ಟಡದ ಛಾವಣಿಯ ಮೇಲೆ ಕೆಲ ಬಾಟಲ್ಗಳು ಬಿದ್ದಿದ್ದು, ಇವರ ಜೊತೆಗೆ ಇನ್ನು ಒಂದಿಬ್ಬರು ಸಹಚರರು ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಜಿಲ್ಲೆಯ ಔರಾದ್ ತಾಲ್ಲೂಕಿನ ಕೌಟಾ ಮತ್ತು ನೆರೆಯ ಜಹೀರಾಬಾದ್ನಲ್ಲಿ ಈಚೆಗೆ ನಡೆದ ಬ್ಯಾಂಕ್ ಕಳವು ಕೃತ್ಯಗಳಿಗೂ ಇಂದಿನ ಘಟನೆಗೂ ಹೋಲಿಕೆ ಇದ್ದು, ಒಂದೇ ತಂಡ ಕೃತ್ಯ ಎಸಗಿದೆಯಾ ಎಂಬ ಸಾಧ್ಯತೆಗಳ ಬಗೆಗೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಭದ್ರತೆ ಸೌಲಭ್ಯ ಇರಲಿಲ್ಲ: ಬ್ಯಾಂಕ್ನಲ್ಲಿ ಸಿಸಿ ಕ್ಯಾಮರಾ ಇದ್ದರೂ ಹೆಚ್ಚುವರಿ ಭದ್ರತಾ ವ್ಯವಸ್ಥೆ ಇರಲಿಲ್ಲ. ಈ ಕುರಿತು ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಸಾಮಾನ್ಯವಾಗಿ ತಾಲ್ಲೂಕು ಮುಖ್ಯ ಶಾಖೆಗೆ ಭದ್ರತೆ ಒದಗಿಸಿದ್ದು, ಗ್ರಾಮೀಣ ಭಾಗದ ಬ್ಯಾಂಕ್ಗಳಿಗೆ ಭದ್ರತೆ ನೀಡಿಲ್ಲ ಎಂದು ಪ್ರತಿಕ್ರಿಯಿಸಿದರು.
ಬ್ಯಾಂಕ್ ಶಾಖೆಯ ವ್ಯವಸ್ಥಾಪಕ ಕೆ.ಎಂ. ಕುಲಕರ್ಣಿ ಈ ಕುರಿತು ಹುಮನಾಬಾದ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ಸ್ಥಳಕ್ಕೆ ಶ್ವಾನದಳ ಮತ್ತು ಬೆರಳಚ್ಚು ವಿಭಾಗದ ತಜ್ಞರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ, ಡಿವೈಎಸ್ಪಿ ಅಮರನಾಥ ರೆಡ್ಡಿ, ಸರ್ಕಲ್ ಇನ್ಸ್ಪೆಕ್ಟರ್ ಅನಿಲ್ಕುಮಾರ್, ಇನ್ಸ್ಪೆಕ್ಟರ್ ಎಲ್.ಬಿ.ಅಗ್ನಿ ಭೇಟಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.