ADVERTISEMENT

ರೈಲುಗಳ ಡಿಕ್ಕಿ,5 ಸಾವು

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ಸಾಹೀಬ್‌ಗಂಜ್/ಗುವಾಹಟಿ (ಪಿಟಿಐ):  ದೆಹಲಿಗೆ ಹೊರಟಿದ್ದ ಬ್ರಹ್ಮಪುತ್ರ ಎಕ್ಸ್‌ಪ್ರೆಸ್ ರೈಲು ಸಾಹೀಬ್‌ಗಂಜ್‌ನಿಂದ 25 ಕಿ. ಮೀ. ದೂರದಲ್ಲಿ ಬೆಳಗಿನ ಜಾವ 5.30ರ ಸುಮಾರಿಗೆ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದ್ದರಿಂದ ಐವರು ಸತ್ತಿದ್ದು, ಒಂದು ಮಗುವೂ ಸೇರಿದಂತೆ 9 ಜನರಿಗೆ ಗಾಯಗಳಾಗಿವೆ.

ಬ್ರಹ್ಮಪುತ್ರ ರೈಲು ದಿಬ್ರುಗಡದಿಂದ ದೆಹಲಿಗೆ ಹೊರಟಿತ್ತು. ಈ ಸಂದರ್ಭದಲ್ಲಿ ಮುಖ್ಯ ಮಾರ್ಗದ ಮೇಲೆ ನಿಂತಿದ್ದ ಸರಕು ಸಾಗಣೆ ರೈಲು ಹಿಮ್ಮುಖವಾಗಿ ಚಲಿಸತೊಡಗಿದ್ದರಿಂದ ಬ್ರಹ್ಮಪುತ್ರ ರೈಲಿಗೆ ಡಿಕ್ಕಿ ಹೊಡೆಯಿತು ಎಂದು ಒಂದು ಮೂಲ ತಿಳಿಸಿದರೆ, ಬ್ರಹ್ಮಪುತ್ರ ರೈಲಿನ ಬೋಗಿಯೊಂದು ಹಳಿ ತಪ್ಪಿ ಪಕ್ಕದಲ್ಲಿ ನಿಂತಿದ್ದ ಸರಕು ಸಾಗಣೆ ರೈಲಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ರೈಲ್ವೆ ಸುರಕ್ಷಾ ಪೊಲೀಸ್ ಪಡೆಯ ವರಿಷ್ಠಾಧಿಕಾರಿ ಪ್ರವೀಣ್ ಶ್ರೀವಾತ್ಸವ್ ಅವರು ತಿಳಿಸಿದ್ದಾರೆ. 

  ಅಪಘಾತದಲ್ಲಿ ಮಡಿದವರ ಕುಟುಂಬಕ್ಕೆ ತಲಾ ಐದು ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿಗಳ ಪರಿಹಾರವನ್ನು ರೈಲ್ವೆ ಸಚಿವ ದಿನೇಶ್ ತ್ರಿವೇದಿ  ಪ್ರಕಟಿಸಿದ್ದಾರೆ. ಸಣ್ಣಪುಟ್ಟ ಗಾಯಗಳಾದವರಿಗೆ ತಲಾ 10 ಸಾವಿರ ರೂಪಾಯಿಗಳ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಅಮಾನತು:  ಸರಕು ಸಾಗಣೆ ರೈಲಿನ ಚಾಲಕ, ಸಹಾಯಕ ಚಾಲಕ, ಗಾರ್ಡ್ ಸೇರಿದಂತೆ ಪೂರ್ವ ರೈಲ್ವೆಯ ಮಾಲ್ಡಾ ವಿಭಾಗದ ಆರು ಮಂದಿಯನ್ನು ನಿರ್ಲಕ್ಷ್ಯತನದ ಆಪಾದನೆಗಾಗಿ ಸಸ್ಪೆಂಡ್ ಮಾಡಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.