ಚೆನ್ನೈ/ನವದೆಹಲಿ (ಐಎಎನ್ಎಸ್) : ತಮಿಳುನಾಡಿನ ಸಿತೇರಿ ಬಳಿ ಬುಧವಾರ ಬೆಳಗ್ಗೆ ಮುಜಾಫರ್ - ಯಶವಂತಪುರ ಎಕ್ಸ್ಪ್ರೆಸ್ ರೈಲು ಹಳಿ ತಪ್ಪಿ 11 ಬೋಗಿಗಳು ಮಗುಚಿಬಿದ್ದ ಪರಿಣಾಮ ಓರ್ವ ಸಾವನ್ನಪ್ಪಿದ್ದು 33 ಮಂದಿಗೆ ಗಾಯಗಳಾಗಿವೆ ಎಂದು ವೆಲ್ಲೂರಿನ ಪೊಲೀಸ್ ವರಿಷ್ಠಾಧಿಕಾರಿ ಐ ಈಶ್ವರನ್ ಅವರು ತಿಳಿಸಿದರು.
ಗಾಯಾಳುಗಳನ್ನು ಅರಕ್ಕೊಣಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ದಕ್ಷಿಣ ರೈಲ್ವೆ ವಿಭಾಗದ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪ್ರಾಥಮಿಕ ತನಿಖೆ ನಡೆಸಿದರು. ಈ ಘಟನೆಯಿಂದಾಗಿ ಅರಕ್ಕೊಣಂ ವಲಯದ ರೈಲು ಸಂಚಾರಕ್ಕೆ ಅಡಚಣೆಯಾಗಿದೆ. ಬೆಂಗಳೂರಿನಿಂದ ಚೆನ್ನೈಗೆ ಹೊರಡುವ ರೈಲು ಸೇರಿದಂತೆ ಒಟ್ಟು ಏಳು ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇ ಇಲಾಖೆಯು ಬಸ್ ಸೇವೆಯನ್ನು ಒದಗಿಸಿದ್ದು ಕನಿಷ್ಠ 200 ಮಂದಿ ಪ್ರಯಾಣಿಕರು ಗುವಾಹತಿ ಎಕ್ಸ್ಪ್ರೆಸ್ ಮೂಲಕ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.
11 ರೈಲುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದ್ದು 3 ರೈಲುಗಳನ್ನು ಭಾಗಶಃ ಹಾಗೂ ನಾಲ್ಕು ರೈಲುಗಳ ಮಾರ್ಗ ಬದಲಾವಣೆ ಮಾಡಿರುವುದಾಗಿ ದಕ್ಷಿಣ ರೈಲ್ವೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.