ನವದೆಹಲಿ: ರೈಲು ಪ್ರಯಾಣಿಕರು ಇನ್ನುಮುಂದೆ ತಮ್ಮ ದೂರುಗಳನ್ನು ದಾಖಲಿಸಲು ಟ್ವಿಟರ್, ಫೇಸ್ಬುಕ್, ಸಹಾಯವಾಣಿ ಇವುಗಳನ್ನು ಬಳಸುವ ಅವಶ್ಯವಿಲ್ಲ. ದೂರು, ಅಹವಾಲುಗಳನ್ನು ಸಲ್ಲಿಸಲು ಅನುಕೂಲವಾಗುವಂತೆ ‘ಪ್ರಯಾಣದ ವೇಳೆ ನೆರವಿಗೆ ಮೊಬೈಲ್ ಆ್ಯಪ್’ (ಮದದ್=ಸಹಾಯ) ಎಂಬ ಹೆಸರಿನ ಮೊಬೈಲ್ ಆ್ಯಪ್ ಅನ್ನು ಈ ತಿಂಗಳ ಅಂತ್ಯದಲ್ಲಿ ರೈಲ್ವೆ ಇಲಾಖೆಯು ಬಿಡುಗಡೆಗೊಳಿಸಲಿದೆ.
ಆಹಾರದ ಗುಣಮಟ್ಟ, ಶೌಚಾಲಯ ಕೊಳಕಾಗಿರುವುದು ಮುಂತಾದ ಯಾವುದೇ ವಿಷಯದ ಕುರಿತು ಪ್ರಯಾಣಿಕರು ಈ ಆ್ಯಪ್ ಮೂಲಕ ದೂರು ದಾಖಲಿಸಬಹುದು. ತುರ್ತು ಸೇವೆಗಳಿಗೂ ಮನವಿ ಸಲ್ಲಿಸಬಹುದು.
‘ಮದದ್’ನಲ್ಲಿ ದಾಖಲಿಸಿದ ದೂರು ನೇರವಾಗಿ ಆಯಾ ವಿಭಾಗದ ಸಂಬಂಧಪಟ್ಟ ಅಧಿಕಾರಿಗಳಿಗೆ ತಲುಪುತ್ತದೆ. ಕೈಗೊಳ್ಳಲಾದ ಕ್ರಮಗಳ ಕುರಿತು ಆನ್ಲೈನ್ನಲ್ಲಿ ಮಾಹಿತಿ ದೊರಕಲಿದೆ. ಈ ಮೂಲಕ ಅಹವಾಲು ಸಲ್ಲಿಸುವುದು ಮತ್ತು ಅವುಗಳನ್ನು ಪರಿಹರಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸಲಾಗುತ್ತದೆ.
ದಾಖಲಾದ ದೂರು ಯಾವ ಹಂತದಲ್ಲಿದೆ ಹಾಗೂ ಕ್ರಮ ಕೈಗೊಳ್ಳಲಾಗಿದೆಯೇ ಎನ್ನುವುದನ್ನು ಸಹ ಪ್ರಯಾಣಿಕರು ತಿಳಿದುಕೊಳ್ಳಬಹುದು.
ಪಾರದರ್ಶಕತೆ ಪ್ರೋತ್ಸಾಹಿಸಲು ಕ್ರಮ
‘ಪ್ರತಿ ತಿಂಗಳು ದಾಖಲಾದ ದೂರುಗಳು ಹಾಗೂ ಅವುಗಳನ್ನು ಇತ್ಯರ್ಥಗೊಳಿಸಿದ ಮಾಹಿತಿ ಆ್ಯಪ್ನಲ್ಲಿ ಲಭ್ಯವಿರಲಿದೆ. ತ್ವರಿತವಾಗಿ ದೂರುಗಳು ಪರಿಹಾರವಾದ ಆಧಾರದ ಮೇಲೆ, ಮೊದಲ ಹಾಗೂ ಕೊನೆಯ ಐದು ಸ್ಥಾನಗಳಲ್ಲಿರುವ ರೈಲ್ವೆ ನಿಲ್ದಾಣಗಳು, ಪ್ರತಿ ವಲಯದ ರಾಜಧಾನಿ, ಶತಾಬ್ದಿ ರೈಲುಗಳ ಮಾಹಿತಿ ನೀಡಲಾಗುವುದು. ಈ ಮೂಲಕ, ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಕಾಪಾಡಿಕೊಳ್ಳಲು ಪ್ರೋತ್ಸಾಹ ನೀಡಲಾಗುತ್ತದೆ’ ಎಂದು ಅಧಿಕಾರಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.