ನವದೆಹಲಿ (ಪಿಟಿಐ): ರೈಲ್ವೇ ಮುಂಗಡಪತ್ರವನ್ನು ~ಜನಸಾಮಾನ್ಯ ವಿರೋಧಿ~ ಎಂಬುದಾಗಿ ಬಣ್ಣಿಸಿರುವ ಬಿಜೆಪಿ, ಮುಂಗಡ ಪತ್ರದಲ್ಲಿ ಭವಿಷ್ಯದ ಕುರಿತು ~ದೃಷ್ಟಿ~ಯೇ ಇಲ್ಲ. ಈ ಮುಂಗಡಪತ್ರದ ಪರಿಣಾಮವಾಗಿ ಬೆಲೆಗಳು ಗಗನಕ್ಕೆ ಏರಲಿವೆ ಎಂದು ಟೀಕಿಸಿದೆ.
ಸಂಸತ್ ಭವನದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಹಿರಿಯ ಬಿಜೆಪಿ ನಾಯಕ ಯಶವಂತ ಸಿನ್ಹ ಅವರು ರೈಲ್ವೇ ಪ್ರಯಾಣಿಕ ದರ ಹೆಚ್ಚಳವನ್ನು ವಿರೋಧಿಸಿ, ~ಸರ್ಕಾರ ಹೀಗೆ ಒಂದೇ ಹೊಡೆತಕ್ಕೆ ಪ್ರಯಾಣಿಕ ದರವನ್ನು ಏರಿಸಿ ಜನ ಸಾಮಾನ್ಯರ ಮೇಲೆ ಇನ್ನೊಂದು ಹೊರೆ ಹೊರಿಸಬಾರದಿತ್ತು ಎಂದು ಹೇಳಿದರು.
ಮಾಜಿ ಹಣಕಾಸು ಸಚಿವರೂ ಆದ ಸಿನ್ಹ ~ದರ ಏರಿಕೆಯು ಅತ್ಯಂತ ಹೆಚ್ಚಿನ ಪ್ರಮಾಣದ್ದಾಗಿರುವುದರಿಂದ ಸಾಮಾನ್ಯರ ಮೇಲೆ ದೊಡ್ಡ ಹೊರೆಯಾಗುತ್ತದೆ ಎಂದು ವಿಶ್ಲೇಷಿಸಿದರು.
ದರಗಳನ್ನು ಹಲವು ವರ್ಷಗಳ ಬಳಿಕ ಒಮ್ಮಿಂದೊಮ್ಮೆಗೇ ಏರಿಸಲಾಗಿದೆ. ಬದಲಿಗೆ ಪ್ರತಿವರ್ಷ ಸ್ವಲ್ಪ ಸ್ವಲ್ಪ ಏರಿಸಿದ್ದರೆ ಜನರಿಗೆ ಅದು ಹೊರೆಯಾಗುತ್ತಿರಲಿಲ್ಲ. 500 ರಿಂದ 1000 ಕಿ.ಮೀ. ಸಂಚರಿಸುವ ಬಡವರಿಗೆ ಈ ದರ ಏರಿಕೆ ಭಾರಿ ಹೊರೆಯಾಗುತ್ತದೆ ಎಂದು ಅವರು ಹೇಳಿದರು.
~ನಾವು ಏನೂ ಮಾಡದೆ ಹಠಾತ್ತನೆ ಒಮ್ಮಿಂದೊಮ್ಮೆಗೇ ಏನಾದರೂ ಮಾಡಿದರೆ ಅದರ ಪರಿಣಾಮ ಅತ್ಯಂತ ಕೆಟ್ಟದಾಗಿರುತ್ತದೆ. ಇದು (ಇಂತಹ ಹೊರೆ) ಸಾಮಾನ್ಯ ಮುಂಗಡಪತ್ರದಲ್ಲೂ ಪುನರಾವರ್ತಿಸಲಾರದು ಎಂದು ನಾನು ಹಾರೈಸುವೆ~ ಎಂದು ಸಿನ್ಹ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.