ADVERTISEMENT

ಲಂಕಾ ತಮಿಳರಿಗೆ ಚಿತ್ರೋದ್ಯಮ ಬೆಂಬಲ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 19:59 IST
Last Updated 2 ಏಪ್ರಿಲ್ 2013, 19:59 IST

ಚೆನ್ನೈ (ಪಿಟಿಐ/ಐಎಎನ್‌ಎಸ್): ಶ್ರೀಲಂಕಾ ತಮಿಳರ  ಪುರ್ನವಸತಿ ಹಾಗೂ ಅಲ್ಲಿ ನಡೆದಿದೆ ಎನ್ನಲಾದ ಯುದ್ಧಾಪರಾಧಗಳ ಬಗ್ಗೆ ಜಾಗತಿಕ ತನಿಖೆ ನಡೆಸುವಂತೆ ಆಗ್ರಹಿಸಿ ತಮಿಳು ನಟರು ಹಾಗೂ ತಮಿಳು ಚಿತ್ರೋದ್ಯಮದ ಇತರ ಪ್ರತಿನಿಧಿಗಳು ಮಂಗಳವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

ಇಲ್ಲಿನ `ದಕ್ಷಿಣ ಭಾರತ ಚಲನಚಿತ್ರ  ಕಲಾವಿದರ ಸಂಘ'ದ ಅಂಗಳದಲ್ಲಿ ನಡೆದ ಉಪವಾಸ ಸತ್ಯಾಗ್ರಹದಲ್ಲಿ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು ಪಾಲ್ಗೊಂಡಿದ್ದರು. ಇದರಿಂದಾಗಿ  ತಮಿಳು ಚಿತ್ರರಂಗದ ಕಾರ್ಯಚಟುವಟಿಕೆಗಳು ಸ್ತಬ್ಧಗೊಂಡಿದ್ದವು.

`ದಕ್ಷಿಣ ಭಾರತ ಚಲನಚಿತ್ರ ಕಲಾವಿದರ' ಅಸೋಸಿಯೇಷನ್‌ನ ಅಧ್ಯಕ್ಷ ಆರ್. ಶರತಕುಮಾರ್, ಅಜಿತ್ ಕುಮಾರ್‌ಹಾಗೂ ಸೂರ್ಯ ಸೇರಿದಂತೆ ಕಾಲಿವುಡ್‌ನ ಪ್ರಮುಖ ಕಲಾವಿದರು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ಶ್ರೀಲಂಕಾದಲ್ಲಿ ಪ್ರತ್ಯೇಕ ತಮಿಳು ದೇಶಕ್ಕಾಗಿ ಜನಾಭಿಪ್ರಾಯ ಸಂಗ್ರಹಿಸುವಂತೆ  ಹಾಗೂ ಯುದ್ಧಾಪರಾಧ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಮಿಳುನಾಡು ವಿಧಾನಸಭೆ ಇತ್ತೀಚೆಗೆ  ಅಂಗೀಕರಿಸಿದ  ಗೊತ್ತುವಳಿಯನ್ನು ಕೇಂದ್ರ ಸರ್ಕಾರ  ಬೆಂಬಲಿಸಬೇಕು ಎಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಶರತ್‌ಕುಮಾರ್ ಒತ್ತಾಯಿಸಿದರು.

ಪ್ರಮುಖರು ಭಾಗಿ: ಈ ಸತ್ಯಾಗ್ರಹದಲ್ಲಿ ಪ್ರಖ್ಯಾತ ನಟರಾದ ರಜನಿಕಾಂತ್ ಹಾಗೂ ಕಮಲ ಹಾಸನ್ ಪಾಲ್ಗೊಂಡಿದ್ದರು. ಅವರಲ್ಲದೇ ವಿಕ್ರಮ್, ಪ್ರಕಾಶ್ ರೈ  ಭಾಗ್ಯರಾಜ, ರಾಧಾ ರವಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.