ನವದೆಹಲಿ: ತನ್ನ ಭ್ರಷ್ಟಾಚಾರ ನಿಗ್ರಹ ವಿಭಾಗವನ್ನು ಪ್ರತ್ಯೇಕಿಸಿ ಲೋಕಪಾಲದ ಅಧೀನಕ್ಕೆ ಒಪ್ಪಿಸುವುದಕ್ಕೆ ಕೇಂದ್ರ ತನಿಖಾ ದಳ (ಸಿಬಿಐ) ತೀವ್ರ ವಿರೋಧ ವ್ಯಕ್ತಪಡಿಸಿದೆ.
ಲೋಕಪಾಲ, ಜನ ಲೋಕಪಾಲ ಸೇರಿದಂತೆ ಈ ಸಂಬಂಧದ ಎಲ್ಲ ಕರಡು ಮಸೂದೆ ಕುರಿತು ಪರಿಶೀಲಿಸುತ್ತಿರುವ ಅಭಿಷೇಕ್ ಮನುಸಿಂಘಿ ್ವ ಅಧ್ಯಕ್ಷತೆಯ ಸಂಸತ್ತಿನ ಸ್ಥಾಯಿ ಸಮಿತಿ ಮುಂದೆ ಸಿಬಿಐ ನಿರ್ದೇಶಕ ಎ. ಪಿ. ಸಿಂಗ್ ಗುರುವಾರ ಹಾಜರಾಗಿ ತಮ್ಮ ನಿಲುವು ಸ್ಪಷ್ಟಪಡಿಸಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
`ಲೋಕಪಾಲದ ಅಧೀನದಲ್ಲಿ ಸಿಬಿಐ ಇಡಿಯಾಗಿ ಕೆಲಸ ಮಾಡಲು ಸಿದ್ಧವಿದೆ. ಆದರೆ, ತನಿಖಾ ದಳದ ದಿನನಿತ್ಯದ ಕೆಲಸದಲ್ಲಿ ಲೋಕಪಾಲ ಹಸ್ತಕ್ಷೇಪ ಮಾಡಬಾರದು. ಅದು ಮೇಲ್ವಿಚಾರಕ ಸಂಸ್ಥೆಯಾಗಿರಬೇಕು~ ಎಂಬ ಅಭಿಪ್ರಾಯವನ್ನು ಸಿಬಿಐ ಹೊಂದಿದೆ. ~ಕೇಂದ್ರ ತನಿಖಾ ದಳದ ದಿನನಿತ್ಯದ ವ್ಯವಹಾರದಲ್ಲಿ ಲೋಕಪಾಲ ಹಸ್ತಕ್ಷೇಪ ಮಾಡುವುದರಿಂದ ಕರ್ತವ್ಯ ನಿರ್ವಹಣೆಗೆ ಅಡ್ಡಿ ಆಗಲಿದೆ. ಪ್ರತಿ ದಿನ ಪ್ರತಿ ಪ್ರಕರಣದ ತನಿಖೆ ಪ್ರಗತಿ ಕೊಡುವುದು ಕಷ್ಟವಾಗಲಿದೆ~ ಎಂಬುದು ಸಂಸ್ಥೆಯ ನಿಲುವು.
ಈ ತನಿಖಾ ದಳದ ನಿರ್ದೇಶಕರು `ಲೋಕಪಾಲ ಸಂಸ್ಥೆ~ಯ ಪದನಿಮಿತ್ತ ಸದಸ್ಯರಾಗಿರಬೇಕು ಎಂಬುದು ಸಂಸ್ಥೆ ಬೇಡಿಕೆ. ಸಿಬಿಐ ನಿರ್ದೇಶಕರು ಸ್ಥಾಯಿ ಸಮಿತಿ ಮುಂದೆ ತಮ್ಮ ನಿಲುವನ್ನು ವಿವರವಾಗಿ ಮಂಡಿಸಲಿದ್ದಾರೆ. ಸಿಬಿಐನಿಂದ ಭ್ರಷ್ಟಾಚಾರ ವಿಭಾಗ ಪ್ರತ್ಯೇಕಿಸುವ ಸಲಹೆಯನ್ನು ಪ್ರಬಲವಾಗಿ ವಿರೋಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಲೋಕಪಾಲ ಸಂಸ್ಥೆಗೆ ಪದನಿಮಿತ್ತ ಸದಸ್ಯರನ್ನು ನೇಮಕ ಮಾಡುವ ವಿಚಾರಕ್ಕೆ ಅಣ್ಣಾ ತಂಡದ ಸಹಮತವಿಲ್ಲ. ಲೋಕಪಾಲ ಪೂರ್ಣಾವಧಿ ಸಂಸ್ಥೆ ಆಗಿರಬೇಕು. ಯಾವುದೇ ಪದನಿಮಿತ್ತ ಸದಸ್ಯರ ನೇಮಕಾತಿಗೆ ಅವಕಾಶ ಇರಬಾರದು ಎಂಬ ಖಚಿತವಾದ ನಿಲುವನ್ನು ಈ ತಂಡ ಹೊಂದಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ನಿರ್ದೇಶಕರನ್ನು ಪದನಿಮಿತ್ತವಾಗಿ ನೇಮಿಸುವ ಸಲಹೆಗೆ ಬೆಲೆ ಸಿಗುವ ಸಾಧ್ಯತೆ ಕಡಿಮೆ.
ಸಿಬಿಐ ಭ್ರಷ್ಟಾಚಾರ ನಿಗ್ರಹ ವಿಭಾಗವನ್ನು ಲೋಕಪಾಲದ ಅಧೀನಕ್ಕೆ ಒಪ್ಪಿಸಬೇಕೆಂಬ ಬೇಡಿಕೆ ಒಳಗೊಂಡು ಜನ ಲೋಕಪಾಲ ಮಸೂದೆಯ ಆರು ಅಂಶಗಳಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಅಣ್ಣಾ ನಡುವೆ ಸಂಘರ್ಷ ಏರ್ಪಟ್ಟಿತ್ತು.
ಆಗಸ್ಟ್ 16ರಿಂದ 12 ದಿನ ಉಪವಾಸ ಕುಳಿತ ಹಿರಿಯ ಗಾಂಧಿವಾದಿಯ ಶಾಂತಿಯುತ ಹೋರಾಟಕ್ಕೆ ಕೊನೆಗೂ ಯಶಸ್ಸು ದೊರೆಯಿತು. ಜನ ಲೋಕಪಾಲ ಮಸೂದೆಯನ್ನು ಈಚೆಗೆ ಮುಗಿದ ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ಭಾಗದಲ್ಲಿ ಮಂಡಿಸಿತು.
ಅಭಿಷೇಕ್ ಮನುಸಿಂಘಿ ್ವ ನೇತೃತ್ವದ ಸಂಸತ್ತಿನ ಸ್ಥಾಯಿ ಸಮಿತಿ ಸರ್ಕಾರದ ಲೋಕಪಾಲ ಮಸೂದೆ, ಅಣ್ಣಾ ಹಜಾರೆ ಅವರ ಜನ ಲೋಕಪಾಲ ಮಸೂದೆ, ಅರುಣಾ ರಾಯ್, ಜೈಪ್ರಕಾಶ್ ನಾರಾಯಣ್ ಅವರ ಮಸೂದೆಗಳು ಸೇರಿದಂತೆ ಈ ಸಂಬಂಧದ ಎಲ್ಲ ಕರಡುಗಳನ್ನು ಪರಿಶೀಲಿಸುತ್ತಿದೆ. ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಅಂಗೀಕಾರ ದೊರೆಯುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.