ADVERTISEMENT

ವೆಂಕಟೇಶ್ ಕುಮಾರ್, ಬಿ. ವೀರಣ್ಣ ಅವರಿಗೆ ಸಂಗೀತ ಮತ್ತು ನಾಟಕ ಅಕಾಡೆಮಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2012, 19:30 IST
Last Updated 9 ಅಕ್ಟೋಬರ್ 2012, 19:30 IST

ನವದೆಹಲಿ (ಪಿಟಿಐ): ಮಂಗಳವಾರ ಇಲ್ಲಿ ನಡೆದ ಸಮಾರಂಭದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ಅವರಿಗೆ ಸಂಗೀತ ಮತ್ತು ನಾಟಕ ಅಕಾಡೆಮಿಯ ಫೆಲೋಶಿಪ್ ಹಾಗೂ ಹಿಂದೂಸ್ತಾನಿ ಗಾಯಕ ವೆಂಕಟೇಶ್ ಕುಮಾರ್ ಮತ್ತು ಗೊಂಬೆಯಾಟ ಕಲಾವಿದ ಬೆಳಗಲ್ಲು ವೀರಣ್ಣ ಅವರಿಗೆ ಅಕಾಡೆಮಿ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಪ್ರದಾನ ಮಾಡಿದರು.

ಅಕಾಡೆಮಿಯ ಫೆಲೋಶಿಪ್ ಮತ್ತು ಪ್ರಶಸ್ತಿ ಪಡೆದ 47 ಮಂದಿ ಗಣ್ಯರಲ್ಲಿ ಸರೋದ್ ಮಾಂತ್ರಿಕ ಅಮ್ಜದ್ ಅಲಿ ಖಾನ್,  ನೃತ್ಯ ಕಲಾವಿದೆ ಪದ್ಮಾ ಸುಬ್ರಮಣ್ಯಂ, ಸಂತೂರ್ ವಾದಕ  ಶಿವಕುಮಾರ್ ಶರ್ಮಾ ಸೇರಿದ್ದಾರೆ.
ಇವರೊಂದಿಗೆ ಚಲನಚಿತ್ರ ಮತ್ತು ಕಿರುತೆರೆಯ ನಟ ವಿಕ್ರಂ ಗೋಖಲೆ ಸೇರಿ 36 ಮಂದಿಗೆ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕೊಳಲು ಮಾಂತ್ರಿಕ ಹರಿಪ್ರಸಾದ್ ಚೌರಾಸಿಯಾ ಅವರು ಫೆಲೋಶಿಪ್‌ನಾಮಕರಣಗೊಂಡಿದ್ದರೂ, ಪೂರ್ವ ನಿರ್ಧಾರಿತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ  ಸಮಾರಂಭಕ್ಕೆ ಗೈರು ಹಾಜರಾಗಿದ್ದರು.ಅಕಾಡೆಮಿ ಫೆಲೋಶಿಪ್ ಮೂರು ಲಕ್ಷ ನಗದು ಮತ್ತು ಭಿನ್ನವತ್ತಳೆ ಒಳಗೊಂಡಿದ್ದರೆ, ಪ್ರಶಸ್ತಿಯು ಒಂದು ಲಕ್ಷ ನಗದು ಹಾಗೂ ಭಿನ್ನವತ್ತಳೆ ಒಳಗೊಂಡಿದೆ.

ದೆಹಲಿಯಲ್ಲಿ ತ್ರಿವೇಣಿ ಕಲಾ ಸಂಘ ಸ್ಥಾಪಿಸಿದ್ದ ಖ್ಯಾತ ರಂಗಭೂಮಿ ಕಲಾವಿದರಾದ ಸುಂದರಿ ಕೃಷ್ಣ ಲಾಲ್ ಶ್ರೀಧರಣಿ ಮತ್ತು ನಾಟಕಕಾರರಾದ ಅಲಕಾನಂದನ್ ಅವರಿಗೆ ಮರಣೋತ್ತರವಾಗಿ ಅಕಾಡೆಮಿ ಪ್ರಶಸ್ತಿ ನೀಡಲಾಯಿತು. 

 ಅವರ ಕುಟುಂಬದ ಸದಸ್ಯರು ಪ್ರಶಸ್ತಿ ಸ್ವೀಕರಿಸಿದರು. ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾದ ಬಳಿಕ ಈ ಇಬ್ಬರೂ ಮೃತಪಟ್ಟಿದ್ದರು.91 ವರ್ಷದ ಕೇರಳದ ಸಂಗೀತಗಾರ ತ್ರಿಪ್ಪೆಕುಳಂ ಅಚ್ಯುತ ಮಾರರ್ ಪ್ರಶಸ್ತಿ ಸ್ವೀಕರಿಸಿದ ಅತಿ ಹಿರಿಯ ವ್ಯಕ್ತಿ. ಗಾಲಿ ಕುರ್ಚಿಯಲ್ಲಿ ಆಗಮಿಸಿದ ಅವರಿಗೆ ಪ್ರಣವ್ ಮುಖರ್ಜಿ ಅವರು ವೇದಿಕೆಯಿಂದ ಕೆಳಗಿಳಿದು ಪ್ರಶಸ್ತಿ ಪ್ರದಾನ ಮಾಡಿದರು.

48 ವರ್ಷದ ಭರತನಾಟ್ಯ  ಕಲಾವಿದ ನರ್ತಕಿ ನಟರಾಜ್ ಅವರು ಪ್ರಶಸ್ತಿ ಸ್ವೀಕರಿಸಿದ ಅತಿ ಕಿರಿಯ ಸಾಧಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.