ADVERTISEMENT

ಸಂಕ್ಷೀಪ್ತ ರಾಷ್ಟ್ರೀಯ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2011, 19:30 IST
Last Updated 14 ಅಕ್ಟೋಬರ್ 2011, 19:30 IST

ಪರಿಸರ ಇಲಾಖೆ ಅನುಮತಿ ನಿರಾಕರಣೆ
ನವದೆಹಲಿ, (ಪಿಟಿಐ):
ಲವಾಸಾ ಕಾರ್ಪೊರೇಷನ್ ಪುಣೆ ಬಳಿ ನಿರ್ಮಿಸಲು ಉದ್ದೇಶಿಸಿರುವ ಮಹತ್ವಾಕಾಂಕ್ಷೆಯ `ಕಣಿವೆ ನಗರ~ ಯೋಜನೆಯ ಪ್ರಥಮ ಹಂತಕ್ಕೆ ಪರಿಸರ ಅನುಮತಿ ನೀಡಲು ಪರಿಸರ ಸಚಿವಾಲಯ ನಿರಾಕರಿಸಿದೆ.

3000 ಕೋಟಿ ರೂಪಾಯಿ ವೆಚ್ಚದ ಈ ಯೋಜನೆ ಕುರಿತು ಮಹಾರಾಷ್ಟ್ರ ಸರ್ಕಾರದ ಮಾಹಿತಿ ಹಾಗೂ ಮುಂಬೈ ಹೈಕೋರ್ಟ್ ಅಂತಿಮ ಆದೇಶದ ಮೇರೆಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವಾಲಯ ಸ್ಪಷ್ಟಪಡಿಸಿದೆ.

ಆಹಾರ ಭದ್ರತಾ ಯೋಜನೆ ಏಕಕಾಲದಲ್ಲಿ ಜಾರಿ
ನವದೆಹಲಿ:
ಯುಪಿಎ ಸರ್ಕಾರದ ಉದ್ದೇಶಿತ ರಾಷ್ಟ್ರೀಯ ಆಹಾರ ಭದ್ರತಾ (ಎನ್‌ಎಫ್‌ಎಸ್) ಯೋಜನೆಯು ದೇಶದಾದ್ಯಂತ ಏಕಕಾಲದಲ್ಲಿ ಜಾರಿಯಾಗಲಿದೆ. ಬಡವರಿಗೆ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಒದಗಿಸುವ ಈ ಯೋಜನೆಯು ಮೊದಲ 10 ವರ್ಷಗಳ ಕಾಲ ನಿರಂತರವಾಗಿ ನಡೆಯಲಿದೆ.

ಯೋಜನೆಯನ್ನು ಆಯ್ದ ಜಿಲ್ಲೆಗಳಲ್ಲಿ ಪೈಲಟ್ ಯೋಜನೆಯಾಗಿ ಜಾರಿಗೆ ತರಲು ಯೋಜನಾ ಆಯೋಗ ಹಾಗೂ ಕೇಂದ್ರ ಹಣಕಾಸು ಸಚಿವಾಲಯ ಉದ್ದೇಶಿಸಿವೆ. ಆದರೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ದೇಶದಾದ್ಯಂತ ಏಕಕಾಲದಲ್ಲಿ ಜಾರಿಗೊಳಿಸಲು ಬಯಸಿದ್ದಾರೆ.

ಭದ್ರತೆ ಮಾರ್ಗಸೂಚಿ: ರಾಜ್ಯಗಳ ಪ್ರತಿಕ್ರಿಯೆ ಕೇಳಿದ ಕೋರ್ಟ್
ನವದೆಹಲಿ (ಪಿಟಿಐ):
ಅತಿ ಗಣ್ಯ ವ್ಯಕ್ತಿಗಳ ಭದ್ರತೆಯ ಮಾರ್ಗಸೂಚಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಶುಕ್ರವಾರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಪ್ರತಿಕ್ರಿಯೆ ಕೇಳಿದೆ. ಅನರ್ಹ ವ್ಯಕ್ತಿಗಳೂ ಈ ಸೌಲಭ್ಯ ಪಡೆಯುತ್ತಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕೋರ್ಟ್ ಈ ಸೂಚನೆ ನೀಡಿದೆ.

ನ್ಯಾಯಮೂರ್ತಿಗಳಾದ ಜಿ.ಎಸ್.ಸಿಂಘ್ವಿ ಹಾಗೂ ಎಸ್.ಜೆ.ಮುಖ್ಯೋಪಾಧ್ಯಾಯ ಅವರನ್ನು ಒಳಗೊಂಡ ಪೀಠ ಸಂಬಂಧಪಟ್ಟ ಸರ್ಕಾರಗಳಿಗೆ ಈ ಸಂಬಂಧ ನೋಟಿಸ್ ಜಾರಿ ಮಾಡಿ, ಮುಂದಿನ ವಿಚಾರಣೆಯನ್ನು ಡಿ.7ಕ್ಕೆ ನಿಗದಿ ಮಾಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.