ADVERTISEMENT

ಸಂಗೀತ ಶಿಕ್ಷಣಕ್ಕೆ ಆದ್ಯತೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 17:20 IST
Last Updated 20 ಫೆಬ್ರುವರಿ 2011, 17:20 IST

ಮುಂಬೈ: ಜಾಗತೀಕರಣದ ಈ ದಿನಗಳಲ್ಲಿ ಸಂಸ್ಕೃತಿ ನಶಿಸುತ್ತಿದ್ದು ಈ ವಿಷಯದಲ್ಲಿ ಶಿಕ್ಷಣ ನೀಡುವುದು ಇಂದು ಅತ್ಯಗತ್ಯ ಎಂದು ಉದ್ಯಮಿ ಭಾಸ್ಕರ ಎಸ್. ಶೆಟ್ಟಿ ಅವರು ಹೇಳಿದ್ದಾರೆ.

 ಅವರು ಇಲ್ಲಿ ಡೊಂಬಿವಲಿಯಲ್ಲಿ ಮೈಸೂರು ಸಂಗೀತ ವಿದ್ಯಾಲಯ ಏರ್ಪಡಿಸಿದ್ದ ಪುರಂದರ- ತ್ಯಾಗರಾಜರ ಆರಾಧನಾ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಕ್ಕಳಿಗೆ ಶಾಸ್ತ್ರೀಯ ಸಂಗೀತದಲ್ಲಿ ಶಿಕ್ಷಣ ನೀಡುವುದು ಅಗತ್ಯ. ಮೈಸೂರು ಸಂಗೀತ ವಿದ್ಯಾಲಯ ಸಂಗೀತದಲ್ಲಿ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ ಎಂದು  ಹೇಳಿದರು.

ಈ ಸಂದರ್ಭದಲ್ಲಿ ಸಂಗೀತ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದವರಿಗೆ ಕರ್ನಾಟಕ ಸರ್ಕಾರದ ಪ್ರಮಾಣ ಪತ್ರಗಳನ್ನು ಅವರು ವಿತರಿಸಿದರು. ಅನಂತರ ವಿದ್ಯಾರ್ಥಿಗಳಿಗೆ ಶಿಷ್ಯವೇತನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಸತ್ಯನಾರಾಯಣ ಅಣತಿ ಮತ್ತು ಎಂ.ಬಿ.ನಟರಾಜ್ ಅವರು ಮಾತನಾಡಿದರು.

ಇದಕ್ಕೆ ಮುನ್ನ ಬಾಲಪ್ರತಿಭೆ 7 ವರ್ಷ ವಯಸ್ಸಿನ  ಅದಿತಿ ಪ್ರಹ್ಲಾದ್‌ಳ ಗಾಯನ ಜನ ಮೆಚ್ಚುಗೆ ಗಳಿಸಿತು. ‘ಭಾಗ್ಯದ ಲಕ್ಷ್ಮಿ ಬಾರಮ್ಮ’ ಹಾಡನ್ನು ಹಿಂದೂಸ್ತಾನಿ, ಕರ್ನಾಟಕ ಮತ್ತು ಸುಗಮ ಸಂಗೀತ ಶೈಲಿಯಲ್ಲಿ ಹಾಡಿದಳು.

 ಕಾರ್ಯಕ್ರಮದಲ್ಲಿ ಸಂಗೀತ ವಿದ್ಯಾಲಯದ ರಾಮು ಶೇಟ್  ಹೆಬ್ಬಳ್ಳಿ, ನಂದಾ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.