ಶ್ರೀನಗರ(ಐಎಎನ್ಎಸ್/ಪಿಟಿಐ): ಅಕಾಲಿಕವಾಗಿ ಸುರಿಯುತ್ತಿರುವ ಭಾರಿ ಹಿಮಪಾತದಿಂದಾಗಿ ಕಾಶ್ಮೀರ–ಜಮ್ಮು ರಾಷ್ಟ್ರೀಯ ಹೆದ್ದಾರಿಯನ್ನು ಸೋಮವಾರದಿಂದ ಮುಚ್ಚಲಾಗಿದ್ದು, ಕಾಶ್ಮೀರ ಕಣಿವೆ ದೇಶದ ಇತರ ಭಾಗಗಳಿಂದ ಸಂಪರ್ಕ ಕಡಿದುಕೊಂಡಿದೆ.
ಕಣಿವೆಯ ಹಲವು ಭಾಗಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಇದರಿಂದ ಜನರು ಮನೆಬಿಟ್ಟು ಹೊರಕ್ಕೆ ಬರಲಾಗದಂತಹ ಸ್ಥಿತಿ ಎದುರಾಗಿದೆ. ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದಿರುವ ಕಾರಣ ವಿದ್ಯುತ್ ಸರಬರಾಜನ್ನು ನಿಲ್ಲಿಸಲಾಗಿದೆ. ಇದರಿಂದ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.
ಅಕಾಲಿಕವಾಗಿ ಸುರಿದ ಹಿಮಪಾತದಿಂದಾಗಿ ಎಲ್ಲಾ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿದೆ. ಅಲ್ಲದೇ, ರಾಜ್ಯ ಲೋಕಸೇವಾ ಆಯೋಗ ಮಂಗಳವಾರ ನಡೆಸಲು ಉದ್ದೇಶಿಸಿದ್ದ ಪರೀಕ್ಷೆಯನ್ನು ಮುಂದೂಡಿದೆ. ಬುಧವಾರದಂದು ಹಿಮಪಾತ ನಿಂತರೆ ಶಾಲಾ–ಕಾಲೇಜುಗಳನ್ನು ಪುನಃ ಆರಂಭಿಸಲಾಗುವುದು ಎಂದು ಶಿಕ್ಷಣ ಸಂಸ್ಥೆಗಳು ಹೇಳಿವೆ.
ಹಿಮಪಾತದಿಂದಾಗಿ ಅನೇಕ ಮರಗಳು ನೆಲಕ್ಕುರುಳಿವೆ. ಇದರಲ್ಲಿ ಅನೇಕ ಮರಗಳು ವಿದ್ಯುತ್ ಕಂಬಗಳ ಮೇಲೆ ಬಿದ್ದಿರುವುದರಿಂದ ವಿದ್ಯುತ್ ಸರಬರಾಜನ್ನು ನಿಲ್ಲಿಸಲಾಗಿದೆ. ಇದರಿಂದ ಕಾಶ್ಮೀರ ಕಣಿವೆಯಲ್ಲಿ ಸೋಮವಾರ ಸಂಜೆಯಿಂದಲೇ ಕತ್ತಲು ಆವರಿಸಿದೆ.
‘ಹಿಮಪಾತದಿಂದಾಗಿ 300 ಕಿ.ಮೀ ಉದ್ದ ಇರುವ ಹೆದ್ದಾರಿಯ ಮೇಲೆ ಸುಮಾರು ಒಂದು ಅಡಿಗಿಂತಲೂ ಹೆಚ್ಚು ಹಿಮ ಬಿದ್ದಿದೆ. ಆದ್ದರಿಂದ ಈ ಮಾರ್ಗದಲ್ಲಿ ಯಾವುದೇ ವಾಹನಗಳನ್ನು ಬಿಡಲಾಗುತ್ತಿಲ್ಲ. ಹಿಮಪಾತ ನಿಂತ ನಂತರ ರಸ್ತೆಯ ಮೇಲೆ ಬಿದ್ದ ಹಿಮವನ್ನು ತೆರವುಗೊಳಿಸಿದ ನಂತರವೇ ಹೆದ್ದಾರಿಯನ್ನು ಪುನಃ ಆರಂಭಿಸಲಾಗುವುದು’ ಎಂದು ಸಂಚಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
‘ಪ್ರತಿಕೂಲ ಹವಾಮಾನದಿಂದಾಗಿ ಯಾವುದೇ ವಿಮಾನಗಳು ಶ್ರೀನಗರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿಲ್ಲ. ಈವರೆಗೆ ಯಾವುದೇ ವಿಮಾನಯಾನವನ್ನು ರದ್ದುಪಡಿಸಿಲ್ಲ. ಒಂದು ವೇಳೆ ಹಿಮಪಾತ ಹೀಗೆಯೇ ಮುಂದುವರಿದರೆ ವಿಮಾನಯಾನಗಳನ್ನು ರದ್ದು ಪಡಿಸುವ ಸಾಧ್ಯತೆ ಇದೆ’ ಎಂದು ವಿಮಾನಯಾನ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕಾಲಿಕ ಹಿಮಪಾತದಿಂದಾಗಿ ಬೆಳೆ ನಷ್ಟವಾಗುವ ಸಾಧ್ಯತೆ ಇದೆ ಎಂದು ರೈತರು ಚಿಂತೆಗೀಡಾಗಿದ್ದಾರೆ.
‘ಅಕಾಲಿಕವಾಗಿ ಸುರಿಯುತ್ತಿರುವ ಹಿಮದಿಂದಾಗಿ ಕೃಷಿ ಮತ್ತು ಹಣ್ಣುಗಳ ಬೆಳೆಗಳಿಗೆ ಸಮಸ್ಯೆಯಾಗುವ ಸಾಧ್ಯತೆ ಇದೆ. ಈ ಸಮಯದಲ್ಲಿ ಹಿಮಪಾತವಾಗುವುದು ಯಾವುದೇ ಬೆಳೆಗೂ ಸರಿಯಾದುದಲ್ಲ’ ಎಂದು ಉತ್ತರ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ರೈತರೊಬ್ಬರು ಅಲವತ್ತುಕೊಂಡಿದ್ದಾರೆ.
ಕಾಶ್ಮೀರ ಕಣಿವೆಯಲ್ಲಿ ಮುಂದಿನ 24 ಗಂಟೆಯವರೆಗೆ ಇದೇ ರೀತಿ ಹಿಮಪಾತವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.