ADVERTISEMENT

ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪಿ.ಜಿ. ಪ್ರವೇಶ: ‘ಕರ್ನಾಟಕ ಮೂಲ’ದ ಮಾನದಂಡ ರದ್ದು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2018, 20:03 IST
Last Updated 4 ಏಪ್ರಿಲ್ 2018, 20:03 IST
ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪಿ.ಜಿ. ಪ್ರವೇಶ: ‘ಕರ್ನಾಟಕ ಮೂಲ’ದ ಮಾನದಂಡ ರದ್ದು
ಸರ್ಕಾರಿ ಕೋಟಾದಲ್ಲಿ ವೈದ್ಯಕೀಯ ಪಿ.ಜಿ. ಪ್ರವೇಶ: ‘ಕರ್ನಾಟಕ ಮೂಲ’ದ ಮಾನದಂಡ ರದ್ದು   

ನವದೆಹಲಿ: ಸರ್ಕಾರಿ ಕೋಟಾ ಅಡಿ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಸ್ನಾತಕೋತ್ತರ ಪದವಿ (ಪಿ.ಜಿ ಕೋರ್ಸ್‌) ಪ್ರವೇಶಕ್ಕಾಗಿ ರಾಜ್ಯ ಸರ್ಕಾರ ರೂಪಿಸಿದ್ದ ‘ಕರ್ನಾಟಕ ಮೂಲ’ದ ಮಾನದಂಡವನ್ನು ರದ್ದುಪಡಿಸಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿದೆ.

ವೈದ್ಯಕೀಯ, ದಂತ ವೈದ್ಯಕೀಯ ಪಿ.ಜಿ. ಕೋರ್ಸ್ ಪ್ರವೇಶ ಕುರಿತು ಕಳೆದ ಮಾರ್ಚ್‌ 10ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ಪ್ರಸ್ತಾಪಿರುವ ಮಾನದಂಡಗಳನ್ನು ಮಾರ್ಪಾಡು ಮಾಡಬೇಕು. ಪ್ರವೇಶ ಪ್ರಕ್ರಿಯೆ ಕುರಿತು ಮರು ಪ್ರಕಟಣೆ ಹೊರಡಿಸಬೇಕು ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಹಾಗೂ ಯು.ಯು. ಲಲಿತ್‌ ಅವರಿದ್ದ ಪೀಠವು ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಿತು.

‘ಸರ್ಕಾರಿ ಕೋಟಾ ಅಡಿ ವೈದ್ಯಕೀಯ, ದಂತ ವೈದ್ಯಕೀಯ ಪಿ.ಜಿ. ಕೋರ್ಸ್‌ನ ಪ್ರವೇಶ ಪಡೆಯ ಬಯಸುವವರು ಕರ್ನಾಟಕ ಮೂಲದವರಾಗಿರಬೇಕು ಅಥವಾ ಕರ್ನಾಟಕದಲ್ಲಿ 10 ವರ್ಷ ಶಿಕ್ಷಣ ಪಡೆದಿರಬೇಕು. ಇಲ್ಲದಿದ್ದರೆ, ಅವರ ಪಾಲಕರಾದರೂ ರಾಜ್ಯ ಮೂಲದವರಾಗಿರಬೇಕು ಎಂಬ ಮಾನದಂಡ ರೂಪಿಸಿರುವ ಸರ್ಕಾರದ ಕ್ರಮ ಅಸಂವಿಧಾನಿಕ’ ಎಂದು ದೂರಿ ಡಾ.ಕೃತಿ ಲಖಿನಾ ಮತ್ತಿತರ ಕನ್ನಡೇತರ ವಿದ್ಯಾರ್ಥಿಗಳು ಮೇಲ್ಮನವಿ ಸಲ್ಲಿಸಿದ್ದರು.

ADVERTISEMENT

ಕರ್ನಾಟಕ ಮೂಲದ ಅರ್ಹತಾ ಮಾನದಂಡಗಳನ್ನು ರೂಪಿಸಿದ್ದ ಸರ್ಕಾರ 2014ರಲ್ಲೂ ಇದೇ ಮಾದರಿಯ ಪ್ರಕಟಣೆ ನೀಡಿದ್ದನ್ನು ವಿರೋಧಿಸಿ ವಿಶಾಲ್‌ ಗೋಯಲ್‌ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ‘ಇದು ಸಮಾನತೆಯ ತತ್ವದ ಉಲ್ಲಂಘನೆಯಾಗಿದೆ’ ಎಂಬ ಅಭಿಪ್ರಾಯದೊಂದಿಗೆ ಮಾನದಂಡ ರದ್ದುಗೊಳಿಸಿ ತೀರ್ಪು ನೀಡಿತ್ತು ಎಂದು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಪರ ವಕೀಲರು ತಿಳಿಸಿದರು.

ವಿಶಾಲ್ ಗೋಯಲ್ ಪ್ರಕರಣದಲ್ಲಿ ನೀಡಲಾದ ತೀರ್ಪನ್ನೇ ಪಾಲಿಸುವುದಾಗಿ ತಿಳಿಸಿದ ಪೀಠವು, ಪ್ರಸಕ್ತ ಸಾಲಿನ ಪ್ರವೇಶ ಕುರಿತ ಪ್ರಕಟಣೆಯನ್ನು ಅಮಾನ್ಯಗೊಳಿಸಲಾಗುತ್ತಿದೆ. ಕರ್ನಾಟಕದಲ್ಲಿ ಪದವಿ ಪಡೆದಿರುವ ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪಿ.ಜಿ. ಕೋರ್ಸ್‌ಗೆ ಖಾಸಗಿ ಹಾಗೂ ಸರ್ಕಾರಿ ಕಾಲೇಜುಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯಲು ಅರ್ಹರು ಎಂದು ತೀರ್ಪಿನಲ್ಲಿ ತಿಳಿಸಿತು.

ರಾಜ್ಯದಲ್ಲಿನ ವೈದ್ಯಕೀಯ ಶಿಕ್ಷಣ ಸಂಸ್ಥೆಗಳ ಅಗತ್ಯಕ್ಕೆ ಅನುಗುಣವಾಗಿ ನುರಿತ ಮಾನವ ಸಂಪನ್ಮೂಲ ಹೊಂದಬೇಕೆಂಬ ಉದ್ದೇಶ
ದಿಂದಲೇ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗೆ ಕನ್ನಡೇತರ ವಿದ್ಯಾರ್ಥಿಗಳ ಪ್ರವೇಶಕ್ಕೆ ಈ ಮಾನದಂಡ
ಗಳನ್ನು ರೂಪಿಸಲಾಗಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿಕೆ ನೀಡಿ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.