ADVERTISEMENT

ಸಿಪಿಎಂ ಚಿಂತನೆ ರಾಷ್ಟ್ರವಿರೋಧಿ: ರಿಜಿಜು ಆರೋಪ

ಪಿಟಿಐ
Published 9 ಅಕ್ಟೋಬರ್ 2017, 19:30 IST
Last Updated 9 ಅಕ್ಟೋಬರ್ 2017, 19:30 IST
ಕಿರಣ್‌ ರಿಜಿಜು (ಸಂಗ್ರಹ ಚಿತ್ರ)
ಕಿರಣ್‌ ರಿಜಿಜು (ಸಂಗ್ರಹ ಚಿತ್ರ)   

ನವದೆಹಲಿ: ಭಾರತೀಯ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ (ಸಿಪಿಎಂ) ರಾಷ್ಟ್ರವಿರೋಧಿ ಚಿಂತನೆಗಳನ್ನು ಹೊಂದಿದೆ ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು ಆರೋಪಿಸಿದ್ದಾರೆ.

ಕೇರಳದಲ್ಲಿ ನಡೆಯುತ್ತಿರುವ ರಾಜಕೀಯ ದಾಳಿ ವಿರುದ್ಧ ರಾಜಧಾನಿಯಲ್ಲಿ ಬಿಜೆಪಿ ಸೋಮವಾರ ಆಯೋಜಿಸಿದ್ದ ‘ಜನರಕ್ಷಾ ಯಾತ್ರೆ’ಯಲ್ಲಿ ಅವರು ಮಾತನಾಡಿದರು.

ಕೇರಳದಲ್ಲಿ ಎಡಪಕ್ಷ ನಡೆಸುತ್ತಿರುವ ರಾಜಕೀಯ ಹಿಂಸಾಚಾರಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗವಿಲ್ಲ  ಎಂದರು. ಕುಂದುತ್ತಿರುವ ಬೆಂಬಲದಿಂದ ಹತಾಶವಾದ ಕಮ್ಯುನಿಸ್ಟ್‌ ಪಕ್ಷಗಗಳು ಎಡಪಂಥೀಯ ಭಯೋತ್ಪಾದನೆಯಲ್ಲಿ ತೊಡಗಿದ್ದು, ಬಿಜೆಪಿ ಕಾರ್ಯಕರ್ತರ ಮೇಲೆ ದಾಳಿ ನಡೆಸುತ್ತಿವೆ ಎಂದು ಆರೋಪಿಸಿದರು.

ADVERTISEMENT

ಇಂತಹ ರಾಜಕೀಯ ದಾಳಿ ಮತ್ತು ಹಿಂಸಾಚಾರದ ಬಗ್ಗೆ ಜನಜಾಗೃತಿ ಮೂಡಿಸಬೇಕು. ಸಿಪಿಎಂ ತಂತ್ರಗಾರಿಕೆಗೆ ಬಿಜೆಪಿ ಬಗ್ಗುವುದಿಲ್ಲ ಎಂದು ಮತ್ತೊಬ್ಬ ಕೇಂದ್ರ ಸಚಿವ ವಿ.ಕೆ. ಸಿಂಗ್‌ ಹೇಳಿದರು.

ಸಿಪಿಎಂ ತಿರುಗೇಟು
ಆರ್‌ಎಸ್‌ಎಸ್‌–ಬಿಜೆಪಿ ರಾಜಕೀಯ ಹಿಂಸಾಚಾರ ನಿಲ್ಲಿಸದಿದ್ದರೆ ತಕ್ಕ ಪ್ರತ್ಯುತ್ತರ ನೀಡುವ ಸಾಮರ್ಥ್ಯ ಎಡ ಪಕ್ಷಗಳಿಗಿದೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ತಿರುಗೇಟು ನೀಡಿದ್ದಾರೆ.

ಬಿಜೆಪಿಯ ಜನರಕ್ಷಾ ಯಾತ್ರೆಗೆ ಪ್ರತಿಯಾಗಿ ಸಿಪಿಎಂ ದೆಹಲಿಯಲ್ಲಿ ಸೋಮವಾರ ಬಿಜೆಪಿ ಕಚೇರಿವರೆಗೆ ಪಾದಯಾತ್ರೆ ನಡೆಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಯೆಚೂರಿ, ಕೇರಳದಲ್ಲಿ ಕೇಸರಿ ಭಯೋತ್ಪಾದನೆಗೆ ಅವಕಾಶ ನೀಡುವುದಿಲ್ಲ. ‘ಸುಮ್ಮನೆ ಕೈಕಟ್ಟಿ ಕೂಡುವ ಜಾಯಮಾನ ನಮ್ಮದಲ್ಲ’ ಎಂದು ಎಚ್ಚರಿಕೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.