ನವದೆಹಲಿ (ಪಿಟಿಐ): ಭಾರತೀಯ ದಂಡ ಸಂಹಿತೆಯ 377ನೇ ಸೆಕ್ಷನ್ ಅಡಿಯಲ್ಲಿ ಸಲಿಂಗರತಿಯನ್ನು ಅಪರಾಧಮುಕ್ತಗೊಳಿಸುವಂತೆ ಮೊತ್ತ ಮೊದಲ ಬಾರಿಗೆ ಅರ್ಜಿ ಸಲ್ಲಿಸಿದ್ದ ಎನ್ಜಿಒ ನಾಜ್ ಪ್ರತಿಷ್ಠಾನವು ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
‘ತೀರ್ಪು ನಮಗೆ ನಿರಾಶೆ ಉಂಟು ಮಾಡಿದೆ. ತೀರ್ಪು ಕಾನೂನು ಪ್ರಕಾರ ಸಮರ್ಪಕವಲ್ಲ ಎಂಬುದು ನಮ್ಮ ಭಾವನೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಿದ್ದೇವೆ’ ಎಂದು ನಾಜ್ ಪ್ರತಿಷ್ಠಾನದ ಪರವಾಗಿ ವಾದಿಸಿದ ಹಿರಿಯ ವಕೀಲ ಆನಂದ್ ಗ್ರೋವರ್ ಹೇಳಿದ್ದಾರೆ.
ತೀರ್ಪು ಸಂದರ್ಭದಲ್ಲಿ ನ್ಯಾಯಾಲಯದಲ್ಲಿ ಹಾಜರಿದ್ದ ಎನ್ಜಿಒ ಕಾರ್ಯಕರ್ತರ ಮುಖದಲ್ಲಿ ನಿರಾಶೆ ಎದ್ದು ಕಾಣುತ್ತಿತ್ತು. ತೀರ್ಪು ಜೀವನದ ಹಕ್ಕನ್ನೇ ಕಸಿದುಕೊಂಡಿದೆ ಎಂದು ಕೋರ್ಟ್ ಹೊರಗಿದ್ದ ಕಾರ್ಯಕರ್ತರೊಬ್ಬರು ಹೇಳಿದರು. ಸಲಿಂಗಿ ಅಥವಾ ಲೈಂಗಿಕ ಅಲ್ಪಸಂಖ್ಯಾತರಾಗಿ ಹುಟ್ಟುವುದು ಆ ಮಗುವಿನ ತಪ್ಪಲ್ಲ. ಅದೊಂದು ಸಹಜ ವಿದ್ಯಮಾನ. ಹೀಗಾಗಿ ಸಲಿಂಗಿಗಳು ಅಥವಾ ಲೈಂಗಿಕ ಅಲ್ಪಸಂಖ್ಯಾತರನ್ನು ಯಾರೂ ದೂಷಿಸುವಂತಿಲ್ಲ ಎಂದೂ ಹೇಳಿದರು.
ಶಾಸನ ರಚನೆ ಸಾಧ್ಯತೆ
ಸಲಿಂಗರತಿ ಕಾನೂನುಬಾಹಿರ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈ ವಿಷಯದ ನಿರ್ವಹಣೆಗೆ ಸರ್ಕಾರವು ಶಾಸನ ರಚನೆ ಹಾದಿಯಲ್ಲಿ ಸಾಗುವ ಸೂಚನೆ ನೀಡಿದೆ.
ಸಲಿಂಗರತಿಯನ್ನು ಕಾನೂನುಬಾಹಿರಗೊಳಿಸುವ ದಂಡ ಸಂಹಿತೆಯ ಸೆಕ್ಷನ್ ರದ್ದುಗೊಳಿಸುವ ಅಧಿಕಾರ ಸಂಸತ್ಗೆ ಇದೆ ಎಂದು ಕೋರ್ಟ್ ಕೂಡ ಹೇಳಿದೆ. ಹಾಗಾಗಿ ಈಗ ಚೆಂಡು ಸಂಸತ್ತಿನ ಅಂಗಳಕ್ಕೆ ಬಂದು ಬಿದ್ದಿದೆ.
ಸುಪ್ರೀಂ ಕೋರ್ಟ್ನ ತೀರ್ಪನ್ನು ಸರ್ಕಾರ ಖಂಡಿತವಾಗಿಯೂ ಗಣನೆಗೆ ತೆಗೆದುಕೊಳ್ಳಲಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಮನೀಶ್ ತಿವಾರಿ ಹೇಳಿದ್ದಾರೆ. ವೀರಪ್ಪ ಮೊಯಿಲಿ ಕಾನೂನು ಸಚಿವರಾಗಿದ್ದಾಗ ಸಲಿಂಗರತಿಯನ್ನು ಕಾನೂನುಬಾಹಿರ ಎಂದು ಪರಿಗಣಿಸುವ 377ನೇ ಸೆಕ್ಷನ್ ಅಪರಾಧಮುಕ್ತಗೊಳಿಸಬೇಕು ಎಂದು ಅವರು ಹೇಳಿರುವುದನ್ನು ಮನೀಶ್ ನೆನಪಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.