ADVERTISEMENT

ಸುಳ್ಳು ಭರವಸೆ ನೀಡಿ ಶ್ರೀಶ್ರೀ ರವಿಶಂಕರ್ ಅವರ ಕಾರ್ಯಕ್ರಮಕ್ಕೆ ಕರೆತಂದರು: ಜನರ ಆರೋಪ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2018, 16:34 IST
Last Updated 11 ಮಾರ್ಚ್ 2018, 16:34 IST
ಶ್ರೀಶ್ರೀ ರವಿಶಂಕರ್
ಶ್ರೀಶ್ರೀ ರವಿಶಂಕರ್   

ಜಮ್ಮು ಕಾಶ್ಮೀರ: ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ ಶ್ರೀಶ್ರೀ ರವಿಶಂಕರ್‌ ಗುರೂಜಿ ಶನಿವಾರ ಶ್ರೀನಗರದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಇದೊಂದು ಶಾಂತಿ ಸಭೆ, ಪೈಗಾಮ್ ಎ ಮೊಹಬ್ಬತ್ (ಪ್ರೀತಿಯ ಸಂದೇಶ) ಎಂಬ ಹೆಸರಿನ ಈ ಕಾರ್ಯಕ್ರಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಭಾಗಿಯಾಗಿದ್ದರು.

ಶೆರಿ ಕಾಶ್ಮೀರ್ ಅಂತರರಾಷ್ಟ್ರೀಯ ಕನ್ವೆನ್ಶನ್ ಸೆಂಟರ್ ‍ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ರವಿಶಂಕರ್ ಅವರು ನೋವು ಮತ್ತು ನರಳುವಿಕೆಯ ಬಗ್ಗೆ ಮಾತು ಶುರು ಮಾಡಿದ ಕೂಡಲೇ ನೆರೆದಿದ್ದ ಜನರು ಇದೆಲ್ಲಾ ಹೇಳಿ, ಭೂತಕಾಲವನ್ನು ಕೆದಕುವುದಕ್ಕೆ ಹೋಗಬೇಡಿ ಎಂದು ಬೊಬ್ಬೆ ಹಾಕಿದ್ದಾರೆ. ಇನ್ನು ಕೆಲವರು ಅಲ್ಲಿಂದ ಎದ್ದು ಹೊರಗೆ ನಡೆಯುವಾಗ ಆಜಾದಿ ಪರ ಘೋಷಣೆ ಕೂಗಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಉತ್ತರ ಕಾಶ್ಮೀರದ ಪಟ್ಟಾನ್ ಎಂಬಲ್ಲಿಂದ ಆಗಮಿಸಿದ್ದ ಕೆಲವು ಯುವಕರನ್ನು ಪತ್ರಕರ್ತರು ಮಾತನಾಡಿಸಿದಾಗ, ಅವರ  ಹೇಳಿದ್ದು ಹೀಗೆ...

'ಎನ್‍ಜಿಒವೊಂದು ನಮಗೆ ಕ್ರಿಕೆಟ್ ಕಿಟ್ ನೀಡಲಿದೆ ಎಂದು ಹೇಳಿರುವ ಕಾರಣ ನಾವು ಇಲ್ಲಿಗೆ ಬಂದಿದ್ದೇವೆ. ನಮ್ಮ ನೆರೆಹೊರೆಯವರು, ಸ್ನೇಹಿತರಿಗೆ ನಾವು ಇಲ್ಲಿಗೆ ಬಂದಿದ್ದೇವೆ ಎಂದು ಗೊತ್ತಾದರೆ ಮುಜುಗರವಾಗುತ್ತದೆ. ಈ ಎಲ್ಲ ವಿಷಯಗಳು ಹೇಗೆ ರಾಜಕೀಯವಾಗಿ ಮಾರ್ಪಡುತ್ತದೆ ಎಂಬುದು ಎಲ್ಲರಿಗೆ ಗೊತ್ತಿದೆ. ಇನ್ನು, ಅಲ್ಲಿಗೆ ಬಂದ ಮಹಿಳೆಯರನ್ನು ರೈಸಿಂಗ್ ಕಾಶ್ಮೀರ್ ಎಂಬ ಪತ್ರಿಕೆಯ ಪ್ರತಿನಿಧಿಗಳು ಮಾತನಾಡಿಸಿದಾಗ ಅವರ ಉತ್ತರವೂ ಇದೇ ರೀತಿಯಾದ್ದಾಗಿತ್ತು.

ADVERTISEMENT

ನಮಗೆ ಹೊಲಿಗೆ ಯಂತ್ರ ಮತ್ತು ಕೌಶಲಕೇಂದ್ರದ ಸರ್ಟಿಫಿಕೇಟ್ ನೀಡುತ್ತೇವೆ ಎಂಬ ಭರವಸೆ ನೀಡಿದ್ದ ಕಾರಣ ನಾವು ಇಲ್ಲಿಗೆ ಬಂದಿದ್ದೇವೆ ಎಂದಿದ್ದಾರೆ. ಒಂದು ವೇಳೆ ಗುರೂಜಿಗೆ ಕಾಶ್ಮೀರದ ಮೇಲೆ ನಿಜವಾದ ಪ್ರೀತಿಯಿದ್ದರೆ ನಾಗರಿಕರ ಮೇಲೆ ಬುಲೆಟ್ ಮತ್ತ ಪೆಲೆಟ್ ದಾಳಿ ನಿಲ್ಲಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದು ಅಲ್ಲಿದ್ದ ಮಹಿಳೆಯೊಬ್ಬರು ಒತ್ತಾಯಿಸಿದ್ದಾರೆ.

ಗುಜ್ಜಾರ್ ನೇತಾರರು ಪರಿಶಿಷ್ಟ ಪಂಗಡದವರಿಗಾಗಿ ಏನಾದರೂ ಘೋಷಣೆ ಮಾಡುತ್ತಾರೆ ಎಂಬ ಆಸೆಯಿಟ್ಟು ಕುಪ್ವಾರದಿಂದ ಹಿರಿಯ ನಾಗರಿಕರು ಬಂದಿದ್ದರು. ಬೆಳಗ್ಗಿನಿಂದ ನೀರು, ಊಟ ತಿಂಡಿ ಬಿಟ್ಟು ಗುಜ್ಜಾರ್ ನೇತಾರರು ಬರುತ್ತಾರೆ ಎಂದು ನಾವಿಲ್ಲಿ ಕಾದು ಕುಳಿತಿದ್ದೆವು ಎಂದು ಖುಷಿ ಮೊಹಮ್ಮದ್ ಹೇಳಿರುವುದಾಗಿ ಪತ್ರಿಕೆಯ ವರದಿಯಲ್ಲಿದೆ.

ಅಂದಹಾಗೆ ಉದ್ಯಮಿ ಶೇಖ್ ಇಮ್ರಾನ್ ಅವರ  ಜಮ್ಮು ಕಾಶ್ಮೀರ್ ಪೀಪಲ್ಸ್ ಅಲಯನ್ಸ್ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಆದರೆ ಕಾರ್ಯಕ್ರಮಕ್ಕೆ ಜನರನ್ನು ಕರೆತರಲು ಈ ರೀತಿ ಸುಳ್ಳು ಭರವಸೆ ನೀಡಿರುವ ಆರೋಪವನ್ನು ಇಮ್ರಾನ್ ನಿರಾಕರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.