ADVERTISEMENT

ಸೊಂಡಿಲೇರಿ 'ಬಾಹುಬಲಿ' ಸ್ಟಂಟ್ ಮಾಡಲು ಹೋದ ವ್ಯಕ್ತಿಯನ್ನು ಎತ್ತಿ ಬಿಸಾಡಿದ ಆನೆ!

​ಪ್ರಜಾವಾಣಿ ವಾರ್ತೆ
Published 13 ನವೆಂಬರ್ 2017, 17:59 IST
Last Updated 13 ನವೆಂಬರ್ 2017, 17:59 IST
ಸೊಂಡಿಲೇರಿ 'ಬಾಹುಬಲಿ' ಸ್ಟಂಟ್ ಮಾಡಲು ಹೋದ ವ್ಯಕ್ತಿಯನ್ನು ಎತ್ತಿ ಬಿಸಾಡಿದ ಆನೆ!
ಸೊಂಡಿಲೇರಿ 'ಬಾಹುಬಲಿ' ಸ್ಟಂಟ್ ಮಾಡಲು ಹೋದ ವ್ಯಕ್ತಿಯನ್ನು ಎತ್ತಿ ಬಿಸಾಡಿದ ಆನೆ!   

ತಿರುವನಂತಪುರಂ: ಎಸ್.ಎಸ್.ರಾಜಮೌಳಿ ನಿರ್ದೇಶನದ ಬಾಹುಬಲಿ – ದಿ ಕನ್‍ಕ್ಲೂಷನ್ ಚಿತ್ರದ 'ಸಾಹೋರೆ ಬಾಹುಬಲಿ' ಹಾಡಿನಲ್ಲಿ ನಾಯಕ ಪ್ರಭಾಸ್ ಆನೆಯ ಸೊಂಡಿಲು ಮೂಲಕ ಅದರ ಬೆನ್ನೇರುವ ದೃಶ್ಯವೊಂದು ಇದೆ. ಬಾಹುಬಲಿಯ ದೃಶ್ಯ ವೈಭವದಲ್ಲಿ ಈ ಸ್ಟಂಟ್ ರೋಚಕವಾಗಿ ಮೂಡಿಬಂದಿತ್ತು.
ಅಂದ ಹಾಗೆ ಕೇರಳದ ವ್ಯಕ್ತಿಯೊಬ್ಬರು ಇದೇ ರೀತಿಯ ಸ್ಟಂಟ್ ಮಾಡಲು ಹೋಗಿ ಆನೆಯಿಂದ ಗುದ್ದು ತಿಂದ ವಿಡಿಯೊವೊಂದು ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.

ವಿಡಿಯೊದಲ್ಲಿ ಏನಿದೆ?
ಬಿಳಿ ಶರ್ಟು, ಲುಂಗಿ ತೊಟ್ಟ ಕೇರಳದ ಯುವಕನೊಬ್ಬ ರಬ್ಬರ್ ತೋಟದಲ್ಲಿ ನಿಂತಿದ್ದ ಸಾಕಾನೆಗೆ ಬಾಳೆ ಹಣ್ಣು ತಿನಿಸಿದ್ದಾನೆ. ಒಂದೆರಡು ಬಾಳೆ ಹಣ್ಣು ತಿಂದ ನಂತರ ಆನೆ ಇನ್ನಷ್ಟು ಬಾಳೆ ಹಣ್ಣುಕೊಡು ಎಂದು ಆನೆ ಸೊಂಡಿಲು ಮುಂದೆ ಮಾಡಿದೆ. ಅಷ್ಟೊತ್ತಿಗೆ ಆನೆಯ ಎರಡೂ ದಂತಗಳನ್ನು ಹಿಡಿದು ಆ ವ್ಯಕ್ತಿ ಆನೆಗೆ ಮುತ್ತನ್ನಿಟ್ಟಿದ್ದಾನೆ.

ಇನ್ನೊಂದು ಬಾರಿ ಅದೇ ರೀತಿ ಮಾಡಲು ಮುಂದಾದಾಗ ಇದೆಲ್ಲವನ್ನೂ ಫೇಸ್‍ಬುಕ್‍ನಲ್ಲಿ ಲೈವ್ ಮಾಡುತ್ತಿದ್ದ ಆತನ ಗೆಳೆಯರು ಏನೂ ಮಾಡಬೇಡ, ನೀನು ಕುಡಿದಿದ್ದೀ, ಏನೂ ಮಾಡಬೇಡ, ಆನೆಗೆ ಕೋಪ ಬರುತ್ತದೆ ಎಂದು ಎಚ್ಚರಿಸಿದ್ದಾರೆ. ಆದರೆ ಪಟ್ಟು ಬಿಡದ ಆತ ಆನೆಯ ಮುಂದೆ ಹೋಗಿ 'ಪರಾಕ್ರಮ' ತೋರಿಸಲು ಮುಂದಾದಾಗ ಆನೆ ಸೊಂಡಿಲಿನಿಂದ ಗುದ್ದಿ ಬಿಸಾಡಿದೆ. ಆ ಗುದ್ದಿಗೆ ನೆಲಕ್ಕುರುಳಿ ಬಿದ್ದ ಆತ ಪ್ರಜ್ಞೆ ಕಳೆದುಕೊಂಡಿದ್ದಾನೆ. ಅಷ್ಟೊತ್ತರಲ್ಲಿ ಲೈವ್ ವಿಡಿಯೊ ಆಫ್ ಆಗಿದೆ.
ಲೈವ್ ವಿಡಿಯೊವನ್ನು ಫೇಸ್‍ಬುಕ್‍ನಿಂದ ತೆಗೆದುಹಾಕಲಾಗಿದ್ದರೂ, ಸಾಮಾಜಿಕ ತಾಣದಲ್ಲಿ ಈ ವಿಡಿಯೊ ಹರಿದಾಡುತ್ತಿದೆ.

ADVERTISEMENT

ಘಟನೆ ನಡೆದದ್ದು ಎಲ್ಲಿ?
ಇಡುಕ್ಕಿ ಜಿಲ್ಲೆಯ ತೊಡುಪುಳದ ಕರಿಮನ್ನೂರರ್ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಬಲ್ಲಮೂಲಗಳ ಪ್ರಕಾರ ಆ ವಿಡಿಯೊದಲ್ಲಿರುವ ವ್ಯಕ್ತಿ ತೊಡುಪುಳ ನಿವಾಸಿ ಜನು ಜಾನ್, ಭಾನುವಾರ ಸಂಜೆ 3  ಘಂಟೆಗೆ ಈ ಘಟನೆ ನಡೆದಿದ್ದು ಜಿನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ಸುದ್ದಿತಾಣ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.