ADVERTISEMENT

ಸ್ವತಂತ್ರ ಪ್ರಾಧಿಕಾರ ರಚನೆಗೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2012, 19:30 IST
Last Updated 4 ಮಾರ್ಚ್ 2012, 19:30 IST

ನವದೆಹಲಿ: ನೀರಿನ ದರ ನಿಗದಿಗೆ ಕೇಂದ್ರವು ಪ್ರತಿ ರಾಜ್ಯದಲ್ಲಿಯೂ ಸ್ವತಂತ್ರ ಪ್ರಾಧಿಕಾರ ರಚಿಸಲು ಚಿಂತನೆ ನಡೆಸಿದೆ.

2012ರ ರಾಷ್ಟ್ರೀಯ ಜಲ ನೀತಿ ಕರಡಿನ ಪ್ರಕಾರ ಎಲ್ಲ ರಾಜ್ಯದಲ್ಲಿಯೂ ಪ್ರತ್ಯೇಕ ಪ್ರಾಧಿಕಾರ ಅಸ್ತಿತ್ವಕ್ಕೆ ಬರಲಿದೆ. ವಿದ್ಯುತ್ ನಿಯಂತ್ರಣ ಪ್ರಾಧಿಕಾರ ಮಾದರಿಯ ಈ ಮಂಡಲಿಯು ನೀರಿನ ದರ, ಸಂಬಂಧಪಟ್ಟ ಹಂಚಿಕೆ, ಮೇಲ್ವಿಚಾರಣಾ ಕಾರ್ಯ, ಪ್ರಗತಿ ಪರಿಶೀಲನೆ, ನೀತಿ ಬದಲಾವಣೆಗೆ ಸೂಚನೆ ಇತ್ಯಾದಿ ಅಂಶಗಳನ್ನು ನಿರ್ಧರಿಸಲಿದೆ.

 ಅಲ್ಲದೆ ಇದು, ಕುಡಿಯಲು, ಕೈಗಾರಿಕೆ ಹಾಗೂ ಕೃಷಿ ಬಳಕೆಗೆ ನೀರು ಹಂಚಿಕೆಯನ್ನು ನಿರ್ಧರಿಸಲಿದೆ. ಜತೆಗೆ ಅಂತರ ರಾಜ್ಯ ಜಲ ವಿವಾದಗಳ ಇತ್ಯರ್ಥಕ್ಕೂ ನೆರವು ನೀಡಲಿದೆ. ಪ್ರಸ್ತುತ ನೀರಿನ ದರವನ್ನು ಸರ್ಕಾರ ಅಥವಾ ಸ್ಥಳೀಯ ಸಂಸ್ಥೆಗಳು ನಿರ್ಧರಿಸುತ್ತಿವೆ. ಜತೆಗೆ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಯನ್ನೂ ಇವು ನೋಡಿಕೊಳ್ಳುತ್ತಿವೆ.

ಸೇವೆ ನೀಡುವುದಕ್ಕಿಂತ ಮಿಗಿಲಾಗಿ ರಾಜ್ಯ ಸರ್ಕಾರವು ನಿಯಂತ್ರಣ ಕಾರ್ಯ ವಿಧಾನದ ಮೇಲೆ ಗಮನ ಹರಿಸಬೇಕು; ಸರಬರಾಜು, ಹಂಚಿಕೆ ವ್ಯವಸ್ಥೆ ನಿರ್ವಹಣೆ, ಶುಲ್ಕ ಸಂಗ್ರಹ ಹಾಗೂ ಕುಡಿಯುವ ನೀರಿನ ಯೋಜನೆ ರೂಪಿಸುವ ಕೆಲಸವನ್ನು ಸಮುದಾಯಕ್ಕೆ ಅಥವಾ ಖಾಸಗಿ ವಲಯಕ್ಕೆ ನೀಡಬೇಕು ಎಂದು ಕರಡು ನೀತಿಯಲ್ಲಿ ಹೇಳಲಾಗಿದೆ.

ಕರಡು ನೀತಿ ಕುರಿತು ಅಭಿಪ್ರಾಯ ಕೇಳಲು ಜಲ ಸಂಪನ್ಮೂಲ ಸಚಿವಾಲಯವು ಶೀಘ್ರವೇ ರಾಜ್ಯ ಜಲ ಸಂಪನ್ಮೂಲ ಸಚಿವರ ಸಭೆ ಕರೆಯಲಿದೆ. ನಂತರದಲ್ಲಿ ಸಚಿವರ ಅನಿಸಿಕೆಗಳನ್ನು ಪ್ರಧಾನಿ ನೇತೃತ್ವದ ರಾಷ್ಟ್ರೀಯ ಜಲ ಮಂಡಳಿ ಮುಂದೆ ಇಡಲಾಗುತ್ತದೆ. ತದನಂತರ ಇದಕ್ಕೆ ಅನುಮೋದನೆ ನೀಡಲಾಗುತ್ತದೆ ಎಂದು ಸಚಿವಾಲಯದ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಮುಖ್ಯಾಂಶಗಳು

*ಪ್ರತಿ ರಾಜ್ಯದಲ್ಲಿಯೂ                  ಅಸ್ತಿತ್ವಕ್ಕೆ
* ಅಂತರ ರಾಜ್ಯ ಜಲ ವಿವಾದಗಳ ಇತ್ಯರ್ಥಕ್ಕೂ ನೆರವು 
* ಕರಡು ನೀತಿ ಅಭಿಪ್ರಾಯ ಕೇಳಲು ಶೀಘ್ರವೇ ಸಭೆ

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.