ಲಖನೌ: ಜನಸಂಖ್ಯಾ ನಿಯಂತ್ರಣಕ್ಕೆ ಕಾನೂನು ರೂಪಿಸುವವರೆಗೂ ಹಿಂದೂಗಳು ಹೆಚ್ಚು ಮಕ್ಕಳನ್ನು ಹೊಂದಬೇಕು ಎಂದು ಉತ್ತರ ಪ್ರದೇಶದ ಮುಜಪ್ಫರ್ನಗರ ಜಿಲ್ಲೆಯ ಖತೌಲಿ ಕ್ಷೇತ್ರದ ಶಾಸಕ ವಿಕ್ರಂ ಸೈನಿ ಹೇಳಿದ್ದಾರೆ.
ಜನಸಂಖ್ಯಾ ನಿಯಂತ್ರಣ ಅಭಿಯಾನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ನನ್ನ ಹಿಂದೂ ಸಹೋದರರೇ, ಕಾನೂನು ರೂಪಿಸುವವರೆಗೂ ನೀವು ಹೆಚ್ಚು ಮಕ್ಕಳನ್ನು ಹೊಂದಬೇಕು. ಮಕ್ಕಳನ್ನು ಪಡೆಯುವುದನ್ನು ನಿಲ್ಲಿಸಬಾರದು’ ಎಂದು ಹೇಳಿದ್ದಾರೆ.
ಹಿಂದೂಗಳು ಇಬ್ಬರು ಮಕ್ಕಳ ನೀತಿಯನ್ನು ಅನುಸರಿಸುತ್ತಿದ್ದು, ಇತರರು ಅನುಸರಿಸುತ್ತಿಲ್ಲ. ಕಾನೂನು ಎಲ್ಲರಿಗೂ ಒಂದೇ ರೀತಿ ಇರಬೇಕು. ಈ ದೇಶ ಎಲ್ಲರಿಗಾಗಿ ಇರುವಂತಹದ್ದು ಎಂದೂ ಅವರು ಹೇಳಿದ್ದಾರೆ.
ಅಲ್ಲದೆ, ‘ನಮಗೆ ಇಬ್ಬರು ಮಕ್ಕಳಾದಾಗ ಮೂರನೇ ಮಗು ಬೇಡವೆಂದು ಪತ್ನಿ ಹೇಳಿದಳು. ಆದರೆ, ನಮಗೆ ನಾಲ್ಕರಿಂದ ಐದು ಮಕ್ಕಳು ಬೇಕೆಂದು ನಾನು ಹೇಳಿದೆ’ ಎಂದೂ ಸೈನಿ ಹೇಳಿದ್ದಾರೆ.
ಸೈನಿ ಈ ಹಿಂದೆಯೂ ಇಂತಹದ್ದೇ ಹೇಳಿಕೆ ನೀಡಿದ್ದಾರೆ. ‘ಭಾರತವನ್ನು ಹಿಂದೂಸ್ತಾನ ಎಂದು ಕರೆಯಲಾಗುತ್ತಿರುವುದರಿಂದ ಇದು ಹಿಂದೂಗಳಿಗಾಗಿ ಇರುವ ದೇಶ’ ಎಂದು ಜನವರಿಯಲ್ಲಿ ಅವರು ಹೇಳಿದ್ದರು. ಹೇಳಿಕೆಗೆ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಸ್ಪಷ್ಟನೆ ನೀಡಿದ್ದ ಅವರು, ‘ನನ್ನ ಹೇಳಿಕೆ ಪಾಕಿಸ್ತಾನದ ವಿರುದ್ಧವಾಗಿತ್ತೇ ವಿನಹ ಮುಸ್ಲಿಮರ ವಿರುದ್ಧವಾಗಿರಲಿಲ್ಲ’ ಎಂದಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.