ಅಜಂಗಢ: ಬಿಜೆಪಿ ಮತ್ತು ಆರ್ಎಸ್ಎಸ್ ’ದಲಿತರು, ಬುಡಕಟ್ಟು ಜನರು ಮತ್ತು ಹಿಂದುಳಿದವರ ಬಗೆಗಿನ ತಾರತಮ್ಯ ನೀತಿಯನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಹಿಂದೂ ಧರ್ಮ ತೊರೆದು ಬೌದ್ಧ ಧರ್ಮ ಸೇರುವುದಾಗಿ ಮಾಯಾವತಿ ತಿಳಿಸಿದ್ದಾರೆ.
ಇಲ್ಲಿನ ಬಿಎಸ್ಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಮಾಯಾವತಿ ಹಿಂದೂ ಧರ್ಮದಲ್ಲಿನ ತಾರತಮ್ಯ ನೀತಿಗೆ ಬೇಸತ್ತು ಅಂಬೇಡ್ಕರ್ ಅವರು ಬೌದ್ಧ ಧರ್ಮ ಸೇರಿದರು. ತಾರತಮ್ಯ ನೀತಿ ಮುಂದುವರೆದಲ್ಲಿ ಅವರಂತೆ ನಾನು ಕೂಡ ಬೌದ್ಧ ಧರ್ಮ ಸೇರುವುದಾಗಿ ಮಾಯಾವತಿ ಎಚ್ಚರಿಕೆ ನೀಡಿದರು. ಕೇಂದ್ರ ಸರ್ಕಾರ ಮತ್ತು ಉತ್ತರ ಪ್ರದೇಶ ಸರ್ಕಾರ ಮೌಡ್ಯ ಆಚರಣೆಗಳು ಮತ್ತು ಪೌರೋಹಿತ್ಯಕ್ಕೆ ಬೆಂಬಲ ನೀಡುತ್ತಿದ್ದು, ದಲಿತರು ಮತ್ತು ಹಿಂದುಳಿದವರನ್ನು ಕಡೆಗಣಿಸಲಾಗುತ್ತಿದೆ. ಇದು ಹೀಗೆಯೇ ಮುಂದುವರೆದರೆ ಬೆಂಬಲಿಗರೊಂದಿಗೆ ಬೌದ್ಧ ಧರ್ಮ ಸೇರುತ್ತೇನೆ ಎಂದು ಮಾಯಾವತಿ ತಿಳಿಸಿದರು.
ಲೋಕಸಭೆಯಲ್ಲಿ ಅಂಬೇಡ್ಕರ್ ಅವರಿಗೆ ಮಾತನಾಡಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಅವರು ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದರು. ನಂತರ ದಲಿತರು ಮತ್ತು ಹಿಂದುಳಿದವರ ಬಗೆಗಿನ ತಾರತಮ್ಯ ನೀತಿಯನ್ನು ಕೈಬಿಡುವಂತೆ ಹಿಂದೂ ಧಾರ್ಮಿಕ ಮುಖಂಡರಿಗೆ ಗಡುವು ನೀಡಿದ್ದರು. ಅವರು ವಿಫಲರಾದಾಗ ಅಂಬೇಡ್ಕರ್ ತಮ್ಮ ಅನುಯಾಯಿಗಳೊಂದಿಗೆ ಬೌದ್ಧ ಧರ್ಮ ಸೇರಿದರು' ಎಂದು ಮಾಯಾವತಿ ತಿಳಿಸಿದರು.
ಹಿಂದೂ ಧರ್ಮದಲ್ಲಿ ಮೌಡ್ಯ ಆಚರಣೆಗಳನ್ನು ಕೈಬಿಡುವಂತೆ ಬಿಜೆಪಿ ಮತ್ತು ಆರ್ಎಸ್ಎಸ್ಗೆ ಗಡುವು ನೀಡುತ್ತೇನೆ. ಅವರು ವಿಫಲರಾದರೆ ನಾನೂ ಅಂಬೇಡ್ಕರ್ ಹಾದಿ ತುಳಿಯುತ್ತೇನೆ' ಎಂದು ಮಾಯಾವತಿ ಎಚ್ಚರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.