ಮುಂಬೈ (ಪಿಟಿಐ): ಹನ್ನೊಂದು ವರ್ಷಗಳ ಹಿಂದೆ ನಡೆದಿದ್ದ, ಅಪಘಾತದ ನಂತರ ವಾಹನ ನಿಲ್ಲಿಸದೇ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಈಗ ಮತ್ತೆ ಹೊಸದಾಗಿ ವಿಚಾರಣೆ ಎದುರಿಸಬೇಕಾಗಿದೆ.
ವಿಚಾರಣೆಯ ಮಧ್ಯದಲ್ಲಿ ಸಲ್ಮಾನ್ ಖಾನ್ ವಿರುದ್ಧ ಉದ್ದೇಶಪೂರ್ವಕವಲ್ಲದ ಮಾನವ ಹತ್ಯೆ ಆರೋಪ ಹೊರಿಸಲಾಗಿತ್ತು. ಇದಕ್ಕೆ ಸಂಬಂಧಿ ಸಿದಂತೆ ಸಾಕ್ಷಿಗಳನ್ನು ಸರಿಯಾಗಿ ವಿಚಾರಣೆ ನಡೆಸಲಾಗಿಲ್ಲ ಎಂಬ ಕಾರಣ
ನೀಡಿ ಪ್ರಕರಣವನ್ನು ಮತ್ತೆ ಹೊಸದಾಗಿ ವಿಚಾರಣೆಗೆ ಒಳಪಡಿಸುವಂತೆ ಸೆಷನ್ಸ್ ನ್ಯಾಯಾಲಯ ಗುರುವಾರ ಆದೇಶಿಸಿದೆ.
ಹೊಸದಾಗಿ ವಿಚಾರಣೆ ನಡೆಸುವಂತೆ ಕೋರಿ ಸಲ್ಮಾನ್ ಖಾನ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶ ಡಿ.ಡಬ್ಲ್ಯು ದೇಶಪಾಂಡೆ, ಹೊಸ ಆರೋಪಕ್ಕೆ ಸಂಬಂಧಿಸಿದಂತೆ ಸಾಕ್ಷಿಗಳ ಪಾಟೀ ಸವಾಲು ನಡೆಸಲು ನಟನಿಗೆ ಅವಕಾಶ ನೀಡದೇ ಇರುವುದರಿಂದ ಮತ್ತೆ ಹೊಸದಾಗಿ ವಿಚಾರಣೆ ನಡೆಯಲಿದೆ ಎಂದು ಹೇಳಿದರು.
ಈ ಮೊದಲು, ನಿರ್ಲಕ್ಷ್ಯದ ಚಾಲನೆ ಮಾಡಿ ಸಾವಿಗೆ ಕಾರಣದ ಆರೋಪದಲ್ಲಿ ಸಲ್ಮಾನ್ ಖಾನ್ ವಿಚಾರಣೆ ನಡೆಸಲಾಗಿತ್ತು. ಈ ಅಪರಾಧಕ್ಕೆ ಗರಿಷ್ಠ ಎರಡು ವರ್ಷಗಳವರೆಗೆ ಶಿಕ್ಷೆ ನೀಡಲು ಅವಕಾಶವಿದೆ.
ಒಂದು ವೇಳೆ, ಉದ್ದೇಶಪೂರ್ವಕವಲ್ಲದ ಹತ್ಯೆ ನಡೆಸಿದ ಆರೋಪ ಸಾಬೀತಾದರೆ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.
ಈಗಾಗಲೇ ಪ್ರಕರಣದ ವಿಚಾರಣೆಗೆ ಸಾಕಷ್ಟು ಸಮಯ ತೆಗೆದುಕೊಂಡಿರುವುದರಿಂದ ಮುಂದಿನ ವಿಚಾರಣೆಗಳು ತ್ವರಿತವಾಗಿ ನಡೆಯಲಿವೆ ಎಂದು ನ್ಯಾಯಾಧೀಶರು ತಿಳಿಸಿದರು.
ಈ ಮೊದಲು ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಲಾಗಿದ್ದ ಸಾಕ್ಷ್ಯಗಳನ್ನು ಪರಿಗಣಿಸಲಾಗುವುದಿಲ್ಲ. ಸಾಕ್ಷಿಗಳನ್ನು ಮತ್ತೆ ಹೊಸದಾಗಿ ವಿಚಾರಣೆಗೆ ಮತ್ತು ಪಾಟೀ ಸವಾಲಿಗೆ ಗುರಿಪಡಿಸಬೇಕು ಎಂದು ಹೇಳಿದ ನ್ಯಾಯಾಧೀಶರು, ವಿಚಾರಣೆಯನ್ನು ಇದೇ 23ಕ್ಕೆ ಮುಂದೂಡಿ; ಪ್ರಾಸಿಕ್ಯೂಷನ್ ಅಂದು ಸಾಕ್ಷಿಗಳ ಪಟ್ಟಿ ಸಲ್ಲಿಸಬೇಕು ಎಂದು ಸೂಚಿಸಿದರು.
ಹೊಸದಾಗಿ ವಿಚಾರಣೆ ಆರಂಭಿಸುವ ದಿನಾಂಕವನ್ನು ನ್ಯಾಯಾಲಯ ಅದೇ ದಿನ ನಿಗದಿ ಪಡಿಸಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.