ADVERTISEMENT

ಹ್ಯಾಟ್ರಿಕ್ ಜಯದ ಭರವಸೆ

ನ್ಯೂಜಿಲೆಂಡ್ ಎದುರು ಸೆಣಸು

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 19:30 IST
Last Updated 6 ಜೂನ್ 2018, 19:30 IST
ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ  ಜಯದ ವಿಶ್ವಾಸದಲ್ಲಿದ್ದಾರೆ
ಭಾರತ ತಂಡದ ನಾಯಕ ಸುನಿಲ್ ಚೆಟ್ರಿ ನ್ಯೂಜಿಲೆಂಡ್ ಎದುರಿನ ಪಂದ್ಯದಲ್ಲಿ ಜಯದ ವಿಶ್ವಾಸದಲ್ಲಿದ್ದಾರೆ   

ಮುಂಬೈ: ನಿರಂತರ ಎರಡು ಜಯ ಗಳಿಸಿ ನಿರಾಳವಾಗಿರುವ ಭಾರತ ತಂಡ ಇಂಟರ್‌ಕಾಂಟಿನೆಂಟಲ್ ಫುಟ್‌ಬಾಲ್ ಟೂರ್ನಿಯಲ್ಲಿ ಗುರವಾರ ನ್ಯೂಜಿಲೆಂಡ್‌ ಎದುರು ಸೆಣಸಲಿದೆ.

ಎರಡು ಪಂದ್ಯಗಳಲ್ಲಿ ಗೆದ್ದಿರುವ ಭಾರತ ಪಾಯಿಂಟ್‌ ಪಟ್ಟಿಯ ಅಗ್ರ ಸ್ಥಾನದಲ್ಲಿದ್ದು ಈಗಾಗಲೇ ಫೈನಲ್‌ ಪ್ರವೇಶಿಸಿದೆ.

ನೂರು ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ನಾಯಕ ಸುನಿಲ್ ಚೆಟ್ರಿ ಫೈನಲ್‌ ಪಂದ್ಯಕ್ಕೂ ಮುನ್ನ ಮತ್ತೊಮ್ಮೆ ತಂಡವನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸಲು ಸಜ್ಜಾಗಿದ್ದಾರೆ.

ADVERTISEMENT

ಮೊದಲ ಪಂದ್ಯದಲ್ಲಿ ಭಾರತ 5–0ಯಿಂದ ತೈಪೆ ವಿರುದ್ಧ ಜಯ ಸಾಧಿಸಿತ್ತು. ನಂತರ ಕಿನ್ಯಾವನ್ನು  3–0ಯಿಂದ ಮಣಿಸಿತ್ತು. ಎರಡು ಪಂದ್ಯಗಳಲ್ಲಿ ಒಟ್ಟು ಐದು ಗೋಲುಗಳನ್ನು ಗಳಿಸಿರುವ ಸುನಿಲ್ ಚೆಟ್ರಿ ಇತರ ಆಟಗಾರರಿಗೂ ಪ್ರೇರಣೆಯಾಗಿದ್ದಾರೆ. ಪ್ರಣಯ್ ಹಲ್ದರ್ ಮತ್ತು ಉದಾಂತ ಸಿಂಗ್ ಮತ್ತು ಜೆಜೆ ಲಾಲ್‌ಪೆಕ್ಲುವಾ ತಲಾ ಒಂದೊಂದು ಗೋಲು ಗಳಿಸಿ ಮಿಂಚಿದ್ದಾರೆ.

ನ್ಯೂಜಿಲೆಂಡ್ ಆಡಿರುವ ಎರಡು ಪಂದ್ಯಗಳ ಪೈಕಿ ಒಂದನ್ನು ಗೆದ್ದಿದ್ದು ಒಂದರಲ್ಲಿ ಡ್ರಾ ಸಾಧಿಸಿದೆ. ತಂಡದ ಸರ್‌ಪ್ರೀತ್‌ ಸಿಂಗ್ ಮತ್ತು ಬೆವನ್‌ ಮಾತ್ರ ಯಶಸ್ಸು ಕಂಡಿದ್ದು ಒಂದು ಗೋಲು ಗಳಿಸಿದ್ದಾರೆ. ಇವರು ಕ್ರಮವಾಗಿ ಕಿನ್ಯಾ ಮತ್ತು ತೈಪೆ ವಿರುದ್ಧ ಗೋಲು ಗಳಿಸಿದ್ದಾರೆ.

ಭಾರತದ ಬಲಿಷ್ಠ ಫಾರ್ವರ್ಡ್ ಮತ್ತು ರಕ್ಷಣಾ ವಿಭಾಗವನ್ನು ತಂಡ ಹೇಗೆ ಎದುರಿಸಲಿದೆ ಎಂಬುದು ಕುತೂ ಹಲದ ಪ್ರಶ್ನೆಯಾಗಿದೆ.

ಭಾರತ ತಂಡದವರು ಬುಧವಾರ ಕಠಿಣ ಅಭ್ಯಾಸ ನಡೆಸಿದ್ದು ಆಟಗಾರರು ಗೆಲುವಿನ ಭರವಸೆ ವ್ಯಕ್ತಪಡಿಸಿದರು. ‘ಸಾಂಘಿಕವಾಗಿ ಉತ್ತಮ ಸಾಮರ್ಥ್ಯ ತೋರಲು ತಂಡಕ್ಕೆ ಸಾಧ್ಯವಾಗಿದೆ. ಮುಂದಿನ ಪಂದ್ಯದಲ್ಲೂ ಈ ಲಯವನ್ನು ಕಾಪಾಡಿಕೊಳ್ಳಲಾಗುವುದು’ ಎಂದು ಆಟಗಾರ ಬಲವಂತ ಸಿಂಗ್‌ ಹೇಳಿದರು.

‘ಟೂರ್ನಿಯಲ್ಲಿ ಉತ್ತಮ ಆಟ ಆಡಿದ್ದೇವೆ. ಇಲ್ಲಿ ತೋರಿದ ಸಾಮರ್ಥ್ಯ ಮುಂದಿನ ಎಎಫ್‌ಸಿ ಕಪ್ ಟೂರ್ನಿಯಲ್ಲಿ ಆಡಲು ಪ್ರೇರಣೆಯಾಗಲಿದೆ’ ಎಂದು ಸುಭಾಶಿಷ್‌ ಬೋಸ್‌ ಅಭಿಪ್ರಾಯಪಟ್ಟರು. ಅವರ ಮಾತಿಗೆ ಹಾಲಿಚರಣ್‌ ನರ್ಜರಿ ದನಿಗೂಡಿಸಿದರು.

ಪಂದ್ಯ ಆರಂಭ: ರಾತ್ರಿ 8 ಗಂಟೆಗೆ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.