ADVERTISEMENT

‘ಮುಖ್ಯವಾಹಿನಿಯಲ್ಲಿ ಮಹಿಳೆಗೆ ಸ್ಥಾನವಿಲ್ಲ’

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 19:30 IST
Last Updated 10 ಮಾರ್ಚ್ 2014, 19:30 IST
‘ಮುಖ್ಯವಾಹಿನಿಯಲ್ಲಿ ಮಹಿಳೆಗೆ ಸ್ಥಾನವಿಲ್ಲ’
‘ಮುಖ್ಯವಾಹಿನಿಯಲ್ಲಿ ಮಹಿಳೆಗೆ ಸ್ಥಾನವಿಲ್ಲ’   

ನವದೆಹಲಿ(ಪಿಟಿಐ): ಜಗತ್ತು ಎಷ್ಟೇ ಮುಂದುವರಿದಿದ್ದರೂ ಮಹಿಳೆಯ ಸ್ಥಿತಿಯಲ್ಲಿ ಗಮನಾರ್ಹ ಬದಲಾವಣೆ­ಯೇನೂ ಆಗಿಲ್ಲ. ಮುಖ್ಯವಾಹಿನಿಯಲ್ಲಿ ಅವಳಿಗೆ ಸ್ಥಾನವಿಲ್ಲ.  ಲಿಂಗ ಆಧಾರಿತ ದೌರ್ಜನ್ಯ ಇನ್ನೂ ವ್ಯಾಪಕವಾಗಿದೆ. ಅಲ್ಲದೇ ವರದಕ್ಷಿಣೆ ಮತ್ತು ಮದ್ಯ­ಪಾನದ ಸಮಸ್ಯೆಗಳನ್ನು ಅವರು ನಿರಂತರವಾಗಿ ಎದುರಿಸುತ್ತಿದ್ದಾರೆ.

ಇದು ಯಾವುದೋ ಮಹಿಳಾವಾದಿ ಭಾಷಣದ ಸಾಲುಗಳಲ್ಲ. ಬದಲಿಗೆ ಲಿಂಗ ಸಮಾನತೆ ಮತ್ತು ಮಹಿಳಾ ಸಬಲೀಕ­ರಣದ ಕುರಿತಾಗಿ ವಿಶ್ವಸಂಸ್ಥೆ, ಆಯೋಗ ಮಹಿಳೆಯರ ಅಭಿಪ್ರಾಯ ಸಂಗ್ರಹಿಸಿ ಬಿಡುಗಡೆ ಮಾಡಿದ ವರದಿ ಹೇಳುತ್ತಿರುವ ವಾಸ್ತವ.

ಮಿದುಳು ಮತ್ತು ಹೃದಯ: ಭಾರತೀಯ ಮಹಿಳೆಯ ಮಾತು’ ಎಂಬ  ಹೆಸರಿನ ಈ ಸಂಶೋಧನಾ ವರದಿಯನ್ನು ಆಂಧ್ರಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಒಡಿಶಾ ಮತ್ತು ರಾಜಸ್ತಾನಗಳಿಂದ ಆಯ್ದ ಮಹಿಳಾ ಪ್ರತಿನಿಧಿಗಳನ್ನು ಸಂದರ್ಶಿಸಿ ಸಿದ್ಧಪಡಿಸಲಾಗಿದೆ.

‘ವ್ಯಾಪಕವಾಗಿ ಮತ್ತು ನಿರಂತರವಾಗಿ ಮಹಿಳೆ ಲಿಂಗ ಆಧಾರಿತ ದೌರ್ಜನ್ಯಕ್ಕೆ ಬಲಿಯಾಗುತ್ತಿದ್ದಾಳೆ. ಬಾಲ್ಯವಿವಾಹ, ಭ್ರೂಣಹತ್ಯೆಗಳು ಇನ್ನೂ ಸಹಜ ಸಂಗತಿ­ಯಾ­ಗಿಯೇ ಇದೆ. ಕಾನೂನುಗಳ ಮೂಲಕ ಅವುಗಳ ಪ್ರಮಾಣವನ್ನು ಕಡಿಮೆ­ಗೊಳಿಸಲು ಪ್ರಯತ್ನಿಸಿದ್ದರೂ ಕಾನೂನು ಬಾಹಿರವಾಗಿ ಲಿಂಗ ತಾರ­ತಮ್ಯ ಮಾಡಲಾಗುತ್ತಿದೆ’ ಎಂದು ಮಹಿಳೆ ಭಾವಿಸುತ್ತಾಳೆ ಎಂಬ ಸಂಗತಿಯನ್ನು ವರದಿ ಬಹಿರಂಗಪಡಿಸಿದೆ.

ಲಿಂಗ ಸಮಾನತೆಗೆ ಸಂಬಂಧಿಸಿದಂತೆ ಪುರುಷ ಪ್ರಧಾನ ಸಮಾಜದಲ್ಲಿ  ಮಹಿಳೆ­ಯರನ್ನು ಇಂದಿಗೂ ತುಚ್ಛಮಟ್ಟದ­ಲ್ಲಿಯೇ ಕಾಣಲಾಗುತ್ತಿದೆ. ಸಾಂಪ್ರದಾ­ಯಿಕ ಕೆಲಸಗಳನ್ನು ಅವರ ಮೇಲೆ ಹೇರಲಾಗುತ್ತದೆ ಎಂದು ಸೋಮವಾರ ಬಿಡುಗಡೆ ಮಾಡಿದ ವರದಿಯಲ್ಲಿ ಹೇಳಲಾಗಿದೆ.

ಮಹಿಳೆ ಮುಖ್ಯವಾಹಿನಿಗೆ ಬರದೇ ಇರಲು ಪ್ರಮುಖ ಕಾರಣ ಅನಕ್ಷರತೆ. ಇದರಿಂದ ಅವರು ತಮ್ಮ ಮೂಲಭೂತ ಸೌಕರ್ಯಗಳನ್ನು ದೊರಕಿಸಿಕೊಳ್ಳಲು ಕಷ್ಟವಾಗುತ್ತದೆ. ಔದ್ಯೋಗಿಕ ಅವಕಾಶಗಳೂ ಕಡಿಮೆ­ಯಾ­ಗುತ್ತವೆ. ಇದರಿಂದ ಅವಳು ಆರ್ಥಿಕವಾಗಿಯೂ ಶೋಷಿತಳಾ­ಗು­ತ್ತಾಳೆ ಎಂದು ಹೇಳಿದೆ.

ಗ್ರಾಮಪಂಚಾಯಿತಿಗಳಂತಹ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಗೆ ಪ್ರಾಧಾ­ನ್ಯ ಇದೆ. ಆದರೆ ಸಂಸತ್ತಿನಲ್ಲಿ ಕೇವಲ ಶೇ 10 ರಷ್ಟು ಮಾತ್ರ ಮಹಿಳೆಯರು ಇದ್ದಾರೆ. ಚುನಾವಣೆ­ಯಂತಹ ನೀತಿ ರೂಪಕ ಮತ್ತು ನಿರ್ಧಾರಕ ಪ್ರಕ್ರಿಯೆ­ಗಳಲ್ಲಿ ಮಹಿಳೆ ಹೆಚ್ಚಿನ ಪ್ರಮಾಣದಲ್ಲಿ ಪಾಲ್ಗೊಳ್ಳುವಂತಾಗಬೇಕು. ಮುಂಬ­ರುವ ಚುನಾವಣಾ ದೃಷ್ಟಿಯಿಂದ ಇದು ಅತ್ಯಂತ ಮಹತ್ವದ್ದಾಗಿದೆ ಎಂದು ಈ ವರದಿ ಸಲಹೆ ಮಾಡಿದೆ.

ಆರೋಗ್ಯ ರಕ್ಷಣೆ: ಆರೋಗ್ಯದ ವಿಷಯಕ್ಕೆ ಬಂದರೆ ಆಯ್ದ ಕೆಲವೇ ಭಾಗಗಳನ್ನು ಹೊರತುಪಡಿಸಿ ಗ್ರಾಮೀಣ ವಿಭಾಗದ ಉಳಿದೆಡೆ ಎಚ್‌ಐವಿ ಮತ್ತು ಏಡ್ಸ್‌ ಬಗ್ಗೆ ಅರಿವಿನ ಮಟ್ಟ ತುಂಬ ಕಡಿಮೆಯಿದೆ. ಋತುಸ್ರಾವದ ಕಾಲದಲ್ಲಿ ಮತ್ತು ಗರ್ಭಿಣಿ­ಯಾದಾಗ ಅವರು ಮುಖ್ಯ­ವಾಗಿ ನೈರ್ಮಲ್ಯದ ಕೊರತೆ ಮತ್ತು ನೀರಿನ ಸಮಸ್ಯೆಯನ್ನು ಎದುರಿಸುತ್ತಾರೆ. ಅಲ್ಲದೇ ಶೌಚಾಲಯಗಳ ಕೊರತೆಯೂ ಇದೆ ಎಂದು ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.