ADVERTISEMENT

‘ಸದುದ್ದೇಶದಿಂದ ರಾಜನಾಥ್‌ ಭೇಟಿಗೆ ನಿರ್ಬಂಧ’

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2013, 19:59 IST
Last Updated 22 ಸೆಪ್ಟೆಂಬರ್ 2013, 19:59 IST

ರಾಂಪುರ (ಉತ್ತರ ಪ್ರದೇಶ)(ಪಿಟಿಐ):  ಕೋಮು ಗಲಭೆ ಪೀಡಿತ ಮುಜಫ್ಪರ್‌ ನಗರಕ್ಕೆ ಭೇಟಿ ನೀಡಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್‌ ಅವರಿಗೆ ಉತ್ತರ ಪ್ರದೇಶ ಸರ್ಕಾರ ಅವಕಾಶ ನೀಡದಿರುವುದು ಶಾಂತಿ ಹಾಗೂ ಕಾನೂನು ಸುವ್ಯ ವಸ್ಥೆಯನ್ನು ಕಾಪಾಡುವ ಉದ್ದೇಶದಿಂದ ಕೂಡಿತ್ತು ಎಂದು ಸಮಾಜವಾದಿ ಪಕ್ಷದ ಹಿರಿಯ ಮುಖಂಡ ಮೊಹಮ್ಮದ್‌ ಅಜಂ ಖಾನ್‌ ಹೇಳಿದ್ದಾರೆ.

ಗಲಭೆಪೀಡಿತ ಪ್ರದೇಶದಲ್ಲಿ ಶಾಂತಿ ಕಾಪಾಡುವ ಹಿತದೃಷ್ಟಿಯಿಂದ ರಾಜನಾಥ್‌ ಅವರಿಗೆ ಅವಕಾಶ ನೀಡಲಾಗಿಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವರೂ ಆದ ಖಾನ್‌ ಹೇಳಿದರು.

ರಾಜನಾಥ್‌ ಅವರು ಉತ್ತರಪ್ರದೇಶದಲ್ಲಿ ಮುಖ್ಯಮಂತ್ರಿಯಂತಹ ಉನ್ನತ ಸ್ಥಾನದಲ್ಲಿದ್ದರು. ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬಂದಾಗ ಏನು ಮಾಡಬಹುದು ಎಂಬುದು ಅವರಿಗೆ ತಿಳಿದಿದೆ ಎಂದವರು ಹೇಳಿದ್ದಾರೆ.

ಲಂಡನ್‌ನ ವಿಮಾನ ನಿಲ್ದಾಣದಲ್ಲಿ ಯೋಗಗುರು ಬಾಬರಾಮ್‌ ದೇವ್‌ ಅವರಿಗೆ ನಿರ್ಬಂಧವಿಧಿಸಿದ್ದರ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಖಾನ್‌, ರಾಂಲೀಲಾ ಮೈದಾನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಮಹಿಳೆಯ ಉಡುಪಿನಲ್ಲಿ ಓಡಿಹೋಗಿ ರಾಮ್‌ದೇವ್ ಅನುಮಾನಾಸ್ಪದ ವರ್ಚಸ್ಸು ಸೃಷ್ಟಿಸಿಕೊಂಡಿದ್ದಾರೆ. ಆದ್ದರಿಂದ ಲಂಡನ್‌ನಲ್ಲಿ ಭದ್ರತಾ ಸಿಬ್ಬಂದಿ ಅವರನ್ನು ತಡೆದರೆ ಅದನ್ನು ಖಂಡಿಸುವುದರಲ್ಲಿ ಅರ್ಥವಿಲ್ಲ ಎಂದ ಅವರು, ಈ ವಿಷಯದಲ್ಲಿ ಕೇಂದ್ರ ಸರ್ಕಾರ ಗಮನಹರಿಸಬೇಕು ಎಂದರು.

ಬ್ರಿಟೀಷರು ತಮ್ಮ ದೇಶಕ್ಕೆ ಸದುದ್ದೇಶದಿಂದಲೇ ಭೇಟಿ ನೀಡುವ ಭಾರತೀಯರನ್ನು ಅವಮಾ ನಿಸುತ್ತಲೇ ಇದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. 

ಮುಲಾಯಂ ಸಿಂಗ್ ಯಾದವ್‌ ಅವರು ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ತನಿಖೆಯನ್ನು ಕೈಬಿಡಲು ಸಿಬಿಐ ವಿಳಂಬ ಧೋರಣೆ ಅನುಸರಿಸುತ್ತಿರುವ ಬಗ್ಗೆ ಮಾತನಾಡಿದ ಖಾನ್, ತನಿಖೆ ಕೈಬಿಡಲು ಆರು ವರ್ಷ ತೆಗೆದುಕೊಂ ಡಿರುವುದು ಸಿಬಿಐ ವರ್ಚಸ್ಸಿಗೆ ಧಕ್ಕೆ ತಂದಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.