ನವದೆಹಲಿ: ‘ಮೀಸಲಾತಿ ಆಧಾರದಲ್ಲಿ ಬಡ್ತಿ ಹೊಂದಿರುವ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸರ್ಕಾರಿ ನೌಕರರಿಗೆ ತತ್ಪರಿಣಾಮ ಜ್ಯೇಷ್ಠತೆ ವಿಸ್ತರಿಸುವ’ ರಾಜ್ಯ ಸರ್ಕಾರದ ನೂತನ ಕಾಯ್ದೆಯನ್ನು ಮಾನ್ಯ ಮಾಡಿರುವ ತೀರ್ಪಿನ ಮರು ಪರಿಶೀಲನೆ ಕೋರಿ ಬಿ.ಕೆ. ಪವಿತ್ರ, ಮತ್ತಿತರರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
‘ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಬಡ್ತಿಯಲ್ಲಿ ಮೀಸಲಾತಿ ನೀತಿ ಅನುಸರಿಸುವುದು ಅರ್ಹತೆಯ ತತ್ವಕ್ಕೆ ವಿರೋಧವಾದುದಲ್ಲ’ ಎಂದು ತಿಳಿಸಿ ನ್ಯಾಯಮೂರ್ತಿಗಳಾದ ಯು.ಯು. ಲಲಿತ್ ಹಾಗೂ ಡಿ.ವೈ. ಚಂದ್ರಚೂಡ್ ಅವರಿದ್ದ ದ್ವಿಸದಸ್ಯ ಪೀಠ ಕಳೆದ ಮೇ 10ರಂದು ಮಹತ್ವದ ತೀರ್ಪು ನೀಡಿತ್ತು.
ಎಂ.ನಾಗರಾಜ್ ಹಾಗೂ ಜರ್ನೇಲ್ ಸಿಂಗ್ ಪ್ರಕರಣಗಳ ವಿಚಾರಣೆ ನಡೆಸಿದ್ದ ಐವರು ಸದಸ್ಯರ ಸಂವಿಧಾನ ಪೀಠ ಕಳೆದ ವರ್ಷ ನೀಡಿದ್ದ ತೀರ್ಪಿಗೆ ಸಂಪೂರ್ಣ ತದ್ವಿರುದ್ಧವಾಗಿರುವ ಈ ತೀರ್ಪಿನಿಂದ ತೀವ್ರ ಅಸಮಧಾನವಾಗಿದೆ’ ಎಂದು 100ಕ್ಕೂ ಅಧಿಕ ಪುಟಗಳಲ್ಲಿ ಸಲ್ಲಿ
ಸಲಾದ ಅರ್ಜಿಯಲ್ಲಿ ತಿಳಿಸಲಾಗಿದೆ.
‘ಸುಪ್ರೀಂ ಕೋರ್ಟ್ ಕಳೆದ 70 ವರ್ಷಗಳಿಂದ ಅನುಸರಿಸಿದ ಸಮತೋಲನವನ್ನು ಧಿಕ್ಕರಿಸಿ, ಮೀಸಲಾತಿ ಕಾನೂನನ್ನು ಪುನಃ ರಚಿಸುವುದಕ್ಕೆ ಈ ತೀರ್ಪು ಯತ್ನಿಸಿದೆ. ಪ್ರಾತಿನಿಧ್ಯದ ದತ್ತಾಂಶವನ್ನು ಪರಿಗಣಿಸಿ ನೀಡಲಾದ ಈ ತೀರ್ಪಿನ ಮೂಲಕ ಸಂವಿಧಾನದ 14 ಮತ್ತು 16(1)ನೇ ವಿಧಿಯಡಿ ಲಭ್ಯವಿರುವ ವೈಯಕ್ತಿಕ ಸಮಾನತೆಯ ಹಕ್ಕನ್ನು ಕಡೆಗಣಿಸಲಾಗಿದೆ’ ಎಂದು ಅರ್ಜಿದಾರರು ಅಭಿಪ್ರಾಯಪಟ್ಟಿದ್ದಾರೆ.
ದಕ್ಷತೆಯ ಆಧಾರ ಕುರಿತ ವಾದವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದ್ದು, ತೀರ್ಪಿನಲ್ಲಿ ಸೂಚಿಸಲಾದ ಪೂರ್ವಾನ್ವಯದ ತತ್ವವು ದೋಷಪೂರಿತವಾಗಿದೆ. ಎಂ. ನಾಗರಾಜ್ ಪ್ರಕರಣದಲ್ಲಿ ನೀಡಲಾದ ತೀರ್ಪಿನಲ್ಲಿ ತಿಳಿಸಿದ್ದ ‘ಕೆನೆಪದರ’ದ ತತ್ವವನ್ನೂ ಪರಿಗಣಿಸದೆ ಕೈಬಿಡಲಾಗಿದ್ದು, ತೀರ್ಪನ್ನು ಮರು ಪರಿಶೀಲಿಸಬೇಕು ಎಂದು ಕೋರಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.