ADVERTISEMENT

128 ಗಣ್ಯರಿಗೆ ಪದ್ಮ ಪ್ರಶಸ್ತಿ; ಭಾರತರತ್ನ ಈ ಬಾರಿಯೂ ಇಲ್ಲ

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 19:30 IST
Last Updated 25 ಜನವರಿ 2011, 19:30 IST

ನವದೆಹಲಿ (ಪಿಟಿಐ): ಪ್ರಸಕ್ತ ಸಾಲಿನ ಗಣರಾಜ್ಯೋತ್ಸವದ ಅಂಗವಾಗಿ ಕೇಂದ್ರ ಸರ್ಕಾರ ಮಂಗಳವಾರ ರಾಜ್ಯದ ಒಂಬತ್ತು ಮಂದಿ ಸೇರಿ ಒಟ್ಟು 128 ಗಣ್ಯರಿಗೆ ‘ಪದ್ಮ’ ಪ್ರಶಸ್ತಿಗಳನ್ನು ಪ್ರಕಟಿಸಿದೆ.

ಪ್ರಶಸ್ತಿ ಪುರಸ್ಕೃತರಲ್ಲಿ ವಿಪ್ರೊ ಮುಖ್ಯಸ್ಥ  ಅಜೀಂ ಪ್ರೇಮ್‌ಜಿ ಮತ್ತು ಆಡಳಿತತಜ್ಞ ದಿವಂಗತ ಎಲ್.ಸಿ. ಜೈನ್ ಅವರಿಗೆ ಪದ್ಮವಿಭೂಷಣ; ಸಂಗೀತಗಾರ ಆರ್.ಕೆ.ಎಸ್. ಶ್ರೀಕಂಠನ್, ಉದ್ಯಮಿ ಕ್ರಿಸ್ ಗೋಪಾಲಕೃಷ್ಣ, ಶಿಕ್ಷಣ ತಜ್ಞ ರಾಮದಾಸ್ ಮಾಧವ ಪೈ, ಪತ್ರಕರ್ತ ಟಿ.ಜೆ.ಎಸ್. ಜಾರ್ಜ್, ಗಾಯಕ ಎಸ್.ಪಿ. ಬಾಲಸುಬ್ರಹ್ಮಣಂ ಅವರಿಗೆ ಪದ್ಮಭೂಷಣ ಹಾಗೂ ಚಲನಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಸಾಹಿತಿ ದೇವನೂರು ಮಹಾದೇವ ಅವರಿಗೆ ಪದ್ಮಶ್ರೀ ಲಭಿಸಿದೆ.

ಗೌರವ ಪಡೆದವರಲ್ಲಿ 13 ಮಂದಿಗೆ ಪದ್ಮ ವಿಭೂಷಣ, 31 ಮಂದಿಗೆ ಪದ್ಮಭೂಷಣ ಹಾಗೂ 84 ಮಂದಿಗೆ ಪದ್ಮಶ್ರೀ ನೀಡಲಾಗಿದೆ. ಆದರೆ ಈ ಬಾರಿಯೂ ದೇಶದ ಅತ್ಯುನ್ನತ ಗೌರವವಾದ ‘ಭಾರತ ರತ್ನ’ವನ್ನು ಯಾರಿಗೂ ನೀಡಿಲ್ಲ. 2008ರಲ್ಲಿ ಸೋಮವಾರವಷ್ಟೇ ನಿಧನರಾದ ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಭೀಮಸೇನ್ ಜೋಷಿ ಅವರಿಗೆ ಈ ಪ್ರಶಸ್ತಿ ನೀಡಿದ್ದನ್ನು ಬಿಟ್ಟರೆ, ಆನಂತರ ಬೇರಾರಿಗೂ ಕೊಡಮಾಡಿಲ್ಲ. ಈ ಸಲ ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮತ್ತಿತರರ ಹೆಸರು ಕೇಳಿಬಂದಿತ್ತಾದರೂ ಕೊನೆಗೂ ಘೋಷಣೆ ಹೊರಬೀಳಲಿಲ್ಲ.

ಉಳಿದಂತೆ ಪ್ರಶಸ್ತಿ ಪಡೆದವರಲ್ಲಿ ಪದ್ಮವಿಭೂಷಣಕ್ಕೆ ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯ, ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಬ್ರಜೇಶ್ ಮಿಶ್ರಾ, ನಟ ಅಕ್ಕಿನೇನಿ ನಾಗೇಶ್ವರರಾವ್, ವೈದ್ಯ ಎ.ಆರ್. ಕಿದ್ವಾಯಿ, ವಿಜ್ಞಾನಿ ಪಿ.ಕೆ. ಐಯ್ಯಂಗಾರ್; ಪದ್ಮ ಭೂಷಣಕ್ಕೆ ಮಾಜಿ ವಿದೇಶಾಂಗ ಕಾರ್ಯದರ್ಶಿ ಶ್ಯಾಮ್ ಶರಣ್, ನಟ ಶಶಿ ಕಪೂರ್, ನಟಿ ವಹೀದಾ ರೆಹಮಾನ್;  ಪದ್ಮಶ್ರೀಗೆ ಗಾಯಕಿ ಉಷಾ ಉತುಪ್, ನಟಿಯರಾದ ಟಬು, ಕಾಜೋಲ್ ಪಾತ್ರರಾದ್ದಾರೆ., ನಟ ಇರ್ಫಾನ್‌ಖಾನ್ ಸೇರಿದ್ದಾರೆ. ಒಟ್ಟು 31 ಮಹಿಳೆಯರು ಮತ್ತು ಎಂಟು ಅನಿವಾಸಿ ಭಾರತೀಯರಿಗೂ ಪ್ರಶಸ್ತಿ ಸಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.