ನವದೆಹಲಿ: ಮೊಬೈಲ್ ಫೋನ್ ಕದ್ದಿದ್ದಕ್ಕೆ ಕಾರ್ಖಾನೆಯ ಕಾರ್ಮಿಕರ ಗುಂಪೊಂದು 19 ವರ್ಷದ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ವರದಿಯಾಗಿದೆ.
ತೀವ್ರ ಗಾಯಗೊಂಡಿದ್ದ ಯುವಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ದೆಹಲಿಯ ಸರಾಯ್ ರೋಹಿಲ್ಲಾದಲ್ಲಿ ಶನಿವಾರ ಘಟನೆ ನಡೆದಿದ್ದು, ಮೃತ ವ್ಯಕ್ತಿಯನ್ನು ಇಜಾರ್ ಎಂದು ಗುರುತಿಸಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಜ್ಞಾನಿ (36) ಎಂಬಾತನನ್ನು ಬಂಧಿಸಲಾಗಿದೆ.
ಶನಿವಾರ ಮುಂಜಾನೆ 4 ಗಂಟೆಗೆ ಕಾರ್ಖಾನೆಗೆ ನುಗ್ಗಿದ್ದ ಇಜಾರ್ ಮೊಬೈಲ್ ಫೋನ್ ಕಳವಿಗೆ ಯತ್ನಿಸಿದ್ದು, ಈ ವೇಳೆ ಸಿಕ್ಕಿ ಬಿದ್ದಿದ್ದಾನೆ. ಈ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಉತ್ತರ) ಸಾಗರ್ ಸಿಂಗ್ ಕಳ್ಸಿ ತಿಳಿಸಿದ್ದಾರೆ.
ಬಳಿಕ ಇಜಾರ್ ಅವರನ್ನು ಕಾರ್ಖಾನೆಯ ಹೊರಗಡೆ ಎಳೆದೊಯ್ದ ಆರೋಪಿ ಜ್ಞಾನಿ ಹಾಗೂ ಇತರರು, ಆತನ ಮೇಲೆ ಪ್ಲಾಸ್ಟಿಕ್ ಪೈಪ್, ಬೆಲ್ಟ್ಗಳಿಂದ ನಿರ್ದಯವಾಗಿ ಹಲ್ಲೆ ನಡೆಸಿದ್ದಾರೆ. ಇಜಾರ್ ಕೂದಲನ್ನು ಕತ್ತರಿಸುವ ಮೂಲಕ ಚಿತ್ರ ಹಿಂಸೆ ನೀಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.