ನವದೆಹಲಿ (ಪಿಟಿಐ): ತರಂಗಾಂತರ ಹಂಚಿಕೆಯ ಪ್ರಕರಣದ ತೀರ್ಪು ನೀಡುವಲ್ಲಿ ಆಗಿರುವ ವಿಳಂಬಕ್ಕೆ ತಾವು ಹೊಣೆಗಾರರಲ್ಲ ಎಂದು 2ಜಿ ಹಗರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಲ್ಲಿ ಒಬ್ಬರಾದ ಎ. ಕೆ. ಗಂಗೂಲಿ ತಿಳಿಸಿದ್ದಾರೆ.
2ಜಿ ಹಂಚಿಕೆ ಪ್ರಕರಣದ ವಿಚಾರಣೆ ನಡೆಸಿದ ಪೀಠದಲ್ಲಿ ನ್ಯಾಯಮೂರ್ತಿ ಜಿ. ಎಸ್. ಸಿಂಘ್ವಿ ಅವರು ಹಿರಿಯರಾಗಿದ್ದರಿಂದ ಅವರು ತೀರ್ಪನ್ನು ಕಾಯ್ದಿರಿಸಿದ್ದರು ಎಂದು ಗಂಗೂಲಿ ತಿಳಿಸಿದ್ದಾರೆ.
ತೀರ್ಪು ನೀಡಿಕೆಯಲ್ಲಿ ಆಗಿರುವ ವಿಳಂಬ ಉದ್ದೇಶಪೂರ್ವಕವಾದುದಲ್ಲ. ಕೆಲಸದ ಒತ್ತಡ ಬಹಳ ಇದ್ದುದರಿಂದ ಸ್ವಾಭಾವಿಕವಾಗಿ ವಿಳಂಬವಾಗಿದೆ ಎಂದು ತಿಳಿಸಿದ್ದಾರೆ.
ಎರಡು ತೀರ್ಪುಗಳನ್ನು ಕ್ರಮವಾಗಿ ಒಂದು ವರ್ಷ ಮತ್ತು 11 ತಿಂಗಳು ಕಾಲ ನಮ್ಮ ಹಿರಿಯ ನ್ಯಾಯಮೂರ್ತಿಗಳು ಕಾಯ್ದಿರಿಸಿದ್ದರು ಎಂದು ಗಂಗೂಲಿ ಅವರು ಸಿಎನ್ಎನ್-ಐಬಿಎನ್ನ ಡೆವಿಲ್ಸ್ ಅಡ್ವೋಕೇಟ್ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.
ನಿವೃತ್ತಿ ಹೊಂದುವ ಮೊದಲು ತೀರ್ಪು ನೀಡಲೇಬೇಕು ಎಂದು ತೀರ್ಮಾನಿಸಿದ್ದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ತಿಳಿಸಿದ್ದಾರೆ.
ತೀರ್ಪು ನೀಡಿಕೆಯಲ್ಲಿ ಉದ್ದೇಶಪೂರ್ವಕವಾದ ವಿಳಂಬ ಇಲ್ಲ ನಿಜ. ಆದರೆ ಇನ್ನೂ ಮೊದಲೇ ನೀಡಬಹುದಾಗಿತ್ತು ಎಂದು ನ್ಯಾಯಮೂರ್ತಿ ಎ. ಕೆ. ಗಂಗೂಲಿ ಅಭಿಪ್ರಾಯಪಟ್ಟರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.