ನವದೆಹಲಿ (ಪಿಟಿಐ): ಬಹುಕೋಟಿ 2ಜಿ ಹಗರಣದ ತನಿಖೆಗೆ ಅಡ್ಡಿಯಾಗಿರುವ ಅಡೆತಡೆಗಳನ್ನು ನಿವಾರಿಸಿ, ತನಿಖೆ ಚುರುಕುಗೊಳಿಸಲು ಕೇಂದ್ರ ಜಾಗೃತ ಆಯೋಗ (ಸಿವಿಸಿ) ನಿರ್ಧರಿಸಿದೆ.
ಈ ಸಂಬಂಧ ಸಿಬಿಐ, ಜಾರಿ ನಿರ್ದೇಶನಾಲಯ ಹಾಗೂ ವರಮಾನ ತೆರಿಗೆ ಇಲಾಖೆಗಳು ನಡೆಸಿದ ತನಿಖೆಯ ಪ್ರಗತಿಯನ್ನು ಸಿವಿಸಿ ಪರಿಶೀಲಿಸಿದೆ. ತನಿಖೆಯ ಸಂದರ್ಭದಲ್ಲಿ ಈ ಸಂಸ್ಥೆಗಳು ಎದುರಿಸುತ್ತಿರುವ ಅಡಚಣೆಗಳು ಏನು ಎಂಬುದನ್ನು ಅರಿಯಲು ಸಿವಿಸಿ ಈ ಕ್ರಮ ಕೈಗೊಂಡಿದೆ.
ಕೇಂದ್ರ ಜಾಗೃತ ಆಯುಕ್ತ ಪ್ರದೀಪ್ ಕುಮಾರ್ ಅವರು ಈ ಮೂರು ತನಿಖಾ ಸಂಸ್ಥೆಗಳ ಅಧಿಕಾರಿಗಳನ್ನು ಭೇಟಿ ಮಾಡಿ ತನಿಖೆಯ ವಿವರ ಪಡೆದಿದ್ದಾರೆ. ಸಂಬಂಧಿಸಿದ ದಾಖಲೆಗಳನ್ನೂ ಸಹ ಪರಿಶೀಲಿಸಿದ್ದಾರೆ ಎಂದು ಸಿವಿಸಿ ಮೂಲಗಳು ತಿಳಿಸಿವೆ.
ದೇಶದೊಳಗೆ ಹಾಗೂ ವಿದೇಶದ ಕೆಲವೆಡೆ ತನಿಖೆ ನಡೆಸಲು ತಮಗೆ ಅಡ್ಡಿಯಾಗಿರುವ ಸಂಗತಿಗಳ ಕುರಿತು ಈ ಅಧಿಕಾರಿಗಳು ಪ್ರದೀಪ್ ಕುಮಾರ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.ತನಿಖೆ ಚುರುಕುಗೊಳಿಸುವಂತೆ ಸಿವಿಸಿ ಈ ಸಂಸ್ಥೆಗಳಿಗೆ ಸೂಚಿಸಿದೆ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.